ಕಾಸರಗೋಡು, ಮೇ 26 (DaijiworldNews/SM): ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಬಂದರು ಸಚಿವ ಅಹಮ್ಮದ್ ದೇವರ್ ಕೋವಿಳ್ ರವರನ್ನು ನೇಮಿಸಲಾಗಿದೆ. ಈ ಬಾರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿ ಎಫ್ ಸರಕಾರದಲ್ಲಿ ಕಾಸರಗೋಡಿಗೆ ಸಚಿವ ಸ್ಥಾನ ಲಭಿಸಿಲ್ಲ. ಈ ಹಿನ್ನೆಲೆ ಅಹಮ್ಮದ್ ದೇವರ್ ಅವರಿಗೆ ಕಾಸರಗೋಡು ಜಿಲ್ಲಾ ಉಸ್ತುವಾರಿ ಸ್ಥಾನ ಲಭಿಸಿದೆ.
ಜಿಲ್ಲೆಯ ಸಚಿವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಹಮ್ಮದ್ ದೇವರ್ ಕೋವಿಳ್ ರವರನ್ನು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕೋಜಿಕ್ಕೋಡ್ ಸೌತ್ ಕ್ಷೇತ್ರದಿಂದ ಆಯ್ಕೆಯಾದ ಎಲ್ ಡಿ ಎಫ್ ಘಟಕ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್(ಐ.ಎನ್.ಎಲ್)ನ ಶಾಸಕರಾಗಿದ್ದು, ಮೊದಲ ಬಾರಿ ಐ ಎನ್ ಎಲ್ ಗೆ ಸಚಿವ ಸ್ಥಾನ ಲಭಿಸಿದೆ.
ಎರಡು ದಶಕಗಳಿಂದ ಎಲ್ ಡಿ ಎಫ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಐ ಎನ್ ಎಲ್ ಪಕ್ಷವನ್ನು ಎರಡು ವರ್ಷಗಳ ಹಿಂದೆ ಎಲ್ ಡಿ ಎಫ್ ಘಟಕ ಪಕ್ಷವಾಗಿ ಸ್ಥಾನ ಮಾನ ನೀಡಿತ್ತು. ಮೊದಲ ಬಾರಿ ಶಾಸಕರೊಬ್ಬರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿ ಕಂಡಿದ್ದು, ಅಹಮ್ಮದ್ ರವರು ಮೊದಲ ಗೆಲುವಿನಲ್ಲೇ ಸಚಿವ ಸ್ಥಾನಕ್ಕೇರಿದ್ದಾರೆ.
ಇನ್ನು ಜಿಲ್ಲೆಯ ಕೋವಿಡ್ ನಿಯಂತ್ರಣ ಚಟುವಟಿಕೆಗಳ ಅವಲೋಕನ ನಡೆಸಲು ಮೇ 29ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಹಮ್ಮದ್ ದೇವರ್ ಕೋವಿಲ್ ಅಧ್ಯಕ್ಷತೆ ವಹಿಸುವರು.