ಮಂಗಳೂರು, ಮೇ.26 (DaijiworldNews/PY): ಭಾರೀ ವಿವಾದದಲ್ಲಿದ್ದ ಮಂಗಳೂರು ಸೆಂಟ್ರಲ್ ಮಾರ್ಕೆಟ್ನ ಹಳೆ ಕಟ್ಟಡವನ್ನು ಬುಧವಾರ ನೆಲಸಮ ಮಾಡಲಾಯಿತು.
ಕಳೆದ ವರ್ಷ ಕೊರೊನಾ ಸೋಂಕಿನ ವೇಳೆ ವ್ಯಾಪಾರ-ವಹಿವಾಟು ಸ್ಥಗಿತವಾದ ಬಳಿಕ ಸೆಂಟ್ರಲ್ ಮಾರ್ಕೆಟ್ ಭಾಗಶಃ ಮುಟ್ಟಲ್ಪಟ್ಟಿತ್ತು. ಹಾಗಾಗಿ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ಈ ಕಾರ್ಯಾಚರಣೆ ಮಾಡಲಾಗಿದೆ ಎನ್ನಲಾಗಿದೆ.
ಪೊಲೀಸ್ ಬಂದೋಬಸ್ತ್ನಲ್ಲಿ ಜೆಸಿಬಿ ಬಳಸಿಕೊಂಡು ನೆಲಸಮ ಕಾರ್ಯ ನಡೆಯುತ್ತಿದ್ದು, ಮಾರುಕಟ್ಟೆಯ ಕಟ್ಟಡದ ಸಮೀಪ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಮನಪ ಆಯುಕ್ತರ ಅಕ್ಷಯ್ ಶ್ರೀಧರ್, "ಸೆಂಟ್ರಲ್ ಮಾರ್ಕೆಟ್ನ ಹಳೆ ಕಟ್ಟಡವನ್ನು ಕೆಡವಲು ಮನಪ ಕೌನ್ಸಿಲ್ನಲ್ಲಿ ನಿರ್ಣಯಿಸಲಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕಳೆದ ವರ್ಷ ಏಪ್ರಿಲ್ 22 ರಂದು ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು" ಎಂದಿದ್ದಾರೆ.
"ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದುಕೊಂಡ ಬಳಿಕ ನಾವು ಸೆಂಟ್ರಲ್ ಮಾರ್ಕೆಟ್ನ ಹಳೆ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ನಾವು ಈ ಪ್ರದೇಶವನ್ನು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇವೆ" ಎಂದು ಹೇಳಿದ್ದಾರೆ.
"ಹೊರ ಭಾಗದಲ್ಲಿರುವ ಅಂಗಡಿಗಳನ್ನು ಶೀಘ್ರವೇ ಖಾಲಿ ಮಾಡುವಂತೆ ಸೂಚಿಸಲಾಗಿದೆ. ನಾಳೆ ಸಂಪೂರ್ಣ ಕಟ್ಟಡವನ್ನು ಕೆಡವಲು ಚಿಂತನೆ ನಡೆಸಲಾಗಿದೆ. ವ್ಯಾಪಾರಸ್ಥರ ಕಾಲಾವಕಾಶ ಕೇಳಿ, ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಕಾಶ ನೀಡಲಾಗುವುದು. ನೂತನ ಮಾರುಕಟ್ಟೆ ಕಾಮಗಾರಿ ಸ್ಮಾರ್ಟ್ ಸಿಟಿ ಯೋಜನೆಯಡಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ತಿಳಿಸಿದ್ದಾರೆ.