ಬೈಂದೂರು, ಮೇ.26 (DaijiworldNews/PY): "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅತ್ಯಂತ ಸಮರ್ಥವಾಗಿ, ಇಡೀ ಕರ್ನಾಟಕ ರಾಜ್ಯ ಮೆಚ್ಚುವಂತೆ, ಎಲ್ಲಾ ರಾಜಕಾರಣಿಗಳು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ನೀಡುವ ಕಾರ್ಯಸೂಚಿ, ಮಾರ್ಗಸೂಚಿ, ಆದೇಶವನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ಮೂಲಕ ಕೊರೊನಾ ಮುಕ್ತ ಕರ್ನಾಟಕ ಮಾಡಲು ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಾಗಿ, ಒಂದಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬುಧವಾರ ಅವರು ಬೈಂದೂರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕಾರ್ಯಪಡೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರವಾಸ ಕೈಗೊಂಡು ಉಪ್ಪುಂದದಲ್ಲಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು, "ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ" ಎಂದು ಉತ್ತರಿಸಿದರು.
"ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್ಗೆ ಆಸ್ಪತ್ರೆ ವ್ಯವಸ್ಥೆಗೊಳಿಸಿ ಅಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಮಾಡಿದೆ. ಕೊರೊನಾ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್ಗಳಿಗೂ ಜವಾಬ್ದಾರಿ ನೀಡಿದೆ. ಕೊರೊನಾ ಸೋಂಕಿತರನ್ನು ಕರೆತರಲು ವಾಹನ ಖರೀದಿಸಲು ಪಂಚಾಯತ್ಗಳಿಗೂ ಅವಕಾಶ ನೀಡಿದೆ. ಹಾಗಯೇ ಪಂಚಾಯತ್ ಸದಸ್ಯರು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರಾಗಿರುತ್ತಾರೆ. ಅವರಿಗೆ ಪ್ರಥಮ ಪ್ರಾಶಸ್ತ್ಯ ಲಸಿಕೆ ನೀಡಬೇಕು ಎನ್ನುವ ಬೇಡಿಕೆ ಇದೆ. ಇದಕ್ಕೂ ಮೊದಲೇ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಆದರೆ ರಾಜ್ಯದಲ್ಲಿ 90 ಸಾವಿರಕ್ಕೂ ಹೆಚ್ಚು ಗ್ರಾ.ಪಂ ಸದಸ್ಯರಿರುವುದರಿಂದ ಸ್ಪಲ್ಪ ವಿಳಂಬವಾಗುತ್ತದೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಗಮನಸೆಳೆಯಲಾಗುವುದು" ಎಂದರು.
"ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈಗಾಗಲೇ ಅನುಮತಿ ಕೊಟ್ಟ ವಿವಾಹಗಳ ಪೈಕಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಜನ ಹೆಚ್ಚು ಜಾಗೃತೆಯಿಂದ ಇರಬೇಕು" ಎಂದರು.
"ಪ್ರಕೃತಿ ವಿಕೋಪದ ಸಂದರ್ಭ ಮನೆಗೆ ನೀರು ನುಗ್ಗಿದರೆ ಐದು ಸಾವಿರ ನೀಡಲಾಗಿದೆ. ಪೂರ್ತಿ ಮನೆಹಾನಿಯಾದರೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಹೇಳಲಾಗಿದೆ. ತಕ್ಷಣ ವರದಿ ಕೊಟ್ಟರೆ ಒಂದು ಲಕ್ಷ ನೀಡಿ, ನಂತರ ಹಂತ ಹಂತವಾಗಿ ನಾಲ್ಕು ಲಕ್ಷ ನೀಡಲಾಗುವುದು" ಎಂದರು.