ಮಂಗಳೂರು, ಮೇ 26 (DaijiworldNews/MS): ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್ ಸೂತ್ರ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಶಾಸಕ ವೇದವ್ಯಾಸ್ ಕಾಮತ್ ಸೂಚಿಸಿದ್ದಾರೆ.
ಪಡೀಲ್ ಅಮೃತ ಕಾಲೇಜು ಪರಿಸರದಲ್ಲಿ ಪದವು ಸೆಂಟ್ರಲ್, ಪದವು ಪೂರ್ವ, ಮರೋಳಿ, ಅಳಪೆ ದಕ್ಷಿಣ, ಅಳಪೆ ಉತ್ತರ ಹಾಗೂ ಕಣ್ಣೂರು ವಾರ್ಡಿನ ಟಾಸ್ಕ್ ಫೋರ್ಸ್ ಸದಸ್ಯರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ತ್ರಿ.ಟಿ (ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್) ಸೂತ್ರ ಪರಿಣಾಮಕಾರಿಯಾಗಿದೆ. ಸೋಂಕಿನ ರೋಗ ಲಕ್ಷಣಗಳು ಕಂಡುಬಂದರೆ ಕೋವಿಡ್ ಪರೀಕ್ಷೆ ನಡೆಸಬೇಕು. ಸೋಂಕು ಧೃಡಪಟ್ಟರೆ ಸೋಂಕಿತರು ವ್ಯಾಪ್ತಿ ಬಿಟ್ಟು ಹೊರಬಾರದಂತೆ ಕ್ರಮ ಕೈಗೊಂಡು, ಔಷಧ ಕಿಟ್ ಗಳನ್ನು ವಿತರಿಸುವತ್ತ ಗಮನ ನೀಡಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಸೂಚನೆ ನೀಡಿದರು.
ಸೋಂಕಿತರು ಮಾತ್ರವಲ್ಲದೆ ಪ್ರಾಥಮಿಕ ಸಂಪರ್ಕ ಇರುವವರ ಬಗ್ಗೆಯೂ ವಿಶೇಷ ಗಮನಹರಿಸಬೇಕಿದೆ. ಸೋಂಕು ಹರಡುವುದನ್ನು ತಡೆಯಲು ಇದು ಪರಿಣಾಮಕಾರಿಯಾಗಿದೆ. ಡೆಂಗ್ಯೂ, ಮಲೇರಿಯಾ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಪ್ರತಿ ಮನೆಗೂ ಸೊಳ್ಳೆಪರದೆ ವಿತರಿಸಲಾಗಿದ್ದು,ಎಂಪಿಡಬ್ಲ್ಯೂ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮನೆಯ ಪರಿಸರವನ್ನು ಸ್ವಚ್ಛವಾಗಿಡುವ ಕುರಿತು ಮನೆಯವರಿಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಡೆಂಗ್ಯೂ, ಮಲೇರಿಯಾ ಹರಡದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.
ಕೋವಿಡ್ ಲಸಿಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್, ಕೈಗವಸುಗಳನ್ನು ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ರೂಪಶ್ರೀ ಪೂಜಾರಿ, ಕಿಶೋರ್ ಕೊಟ್ಟಾರಿ, ಭಾಸ್ಕರ್ ಮೈೂಯ್ಲಿ, ಕೇಶವ ಮರೋಳಿ, ಚಂದ್ರಾವತಿ ವಿಶ್ವನಾಥ್, ಶೋಭಾ ಪೂಜಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.