ಕಾರ್ಕಳ, ಮೇ 26 (DaijiworldNews/MS): ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಾಗಿದೆ. ಇಲ್ಲಿನ ವಿಶೇಷ ವೆಂದರೆ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಜೊತೆಗೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪುಷ್ಪ, ಹಣ್ಣು, ಔಷಧ ಗುಣ ಹೊಂದಿರುವ 115 ಕ್ಕೂ ಮಿಕ್ಕಿ ವಿವಿಧ ಜಾತಿಯ ಸಸ್ಯಗಳು ನೆಟ್ಟು ಪೋಷಿಸಲಾಗುತ್ತಿದೆ. ಆದುದರಿಂದ ಅಕ್ಷರ ಜ್ಞಾನದೊಂದಿಗೆ ಸಸ್ಯ ಸೃಷ್ಠಿಯ ವಿದ್ಯಾ ದೇಗುಲಎಂಬ ಹೆಸರು ಚಾಲ್ತಿಯಲ್ಲಿದೆ.
ಶಾಲಾ ಆವರಣದಲ್ಲಿ ಗಿಡಮೂಲಿಕೆಗಳ ಸಸಿಗಳ ಧನ್ವಂತರಿ ಆಯುರ್ವೇಧ ಆರೋಗ್ಯ ವನವಿದ್ದು, 115ಕ್ಕೂ ಅಧಿಕ ಸಸಿಗಳನ್ನು ವನದಲ್ಲಿ ನೆಟ್ಟು ಆರೈಕೆ ಮಾಡಲಾಗುತ್ತಿದೆ. ಗಿಡಗಳಿಗೆ ಹೆಸರುಗಳನ್ನು ಬರೆಯಲಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳೇ ಆರೈಕೆ ಮಾಡುತ್ತಿದ್ದರಾದರೂ, ಕರೋನಾ ಸಂಕಷ್ಟದ ದಿನಗಳಲ್ಲಿ ಶಿಕ್ಷಕರೇ ಇದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಜ್ಞಾನ ಸಂಪತ್ತಿನ ವಿಶೇಷತೆಗಳು:
ಶಾಲಾ ಕೈತೋಟದಲ್ಲಿ ಹೂವು, ಬಸಲೆ ಇತ್ಯಾದಿ ತರಕಾರಿಗಳಿವೆ. ಗೋಡೆಗಳ ಮೇಲೆ ಪರಿಸರ ಸಂರಕ್ಷಣೆಯ ಜಾಗೃತಿ ವಾಣಿ, ತುಳುನಾಡ ವೈಭವ, ಮರ-ಗಿಡಗಳಲ್ಲಿ ಮಹಾತ್ಮರು-ಕವಿಗಳ ಹೆಸರು, ಸುಸಜ್ಜಿತ ಕಲಿಕಾ ಸಾಮಗ್ರಿ, ನಲಿಕಲಿ, ಶಿಕ್ಷಣದ ರಥ ಪುಟಾಣಿ ದೇವರುಗಳ ಮನಯಂಗಳದತ್ತ ವಿದ್ಯಾಗಮ ಶಿಕ್ಷಣ. ಗುಬ್ಬಚ್ಛಿ ಸ್ಪೋಕನ್, ಭಜನೆ, ಪ್ರಾರ್ಥನೆ, ನಿತ್ಯ ಸ್ಮರಣೆಗಳಿವೆ. ಬಹುಬಾಷ ದಿನಪತ್ರಿಕೆ ಓದು, ರೇಡಿಯೋ ವಾಕ್. ರೇಡಿಯೋದ ಝೇಂಕಾರ ಆಲಿಸುವುದು ಚಟುವಟಿಕೆಗಳಿವೆ. ಹಸುರು ಶಾಲೆ, ಉತ್ತಮ ಶಾಲೆ ಪ್ರಶಸ್ತಿ ಲಭಿಸಿದೆ.
ಹುಟ್ಟುಹಬ್ಬ ಸಲುವಾಗಿ ಪುಸ್ತಕದ ಉಡುಗೊರೆ
ಸಿಹಿತಿಂಡಿಗಳನ್ನು ವಿತರಿಸಿ ಹುಟ್ಟು ಹಬ್ಬವನ್ನು ಇಲ್ಲಿನ ಶಾಲಾ ವಿದ್ಯಾರ್ಥಿಗಳು ಆಚರಿಸುವುದಿಲ್ಲ. ಬದಲಾಗಿ ಪುಸ್ತಕವನ್ನು ಶಾಲೆಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಸುಮಾರು 50 ಸಾವಿರದಷ್ಟು ಪುಸ್ತಕಗಳು ಇದೇ ಶಾಲೆಯ ಓದ್ಕೊಳಿ ಗ್ರಂಥಾಲಯದಲ್ಲಿ ಇದೆ. ಶಿಕ್ಷಣ ಅಭಿಮಾನಿಗಳು, ಪೊಷಕರು ಇದಕ್ಕೆ ಕೈಜೋಡಿಸಿದ್ದಾರೆ.
ಬೌದ್ಧಿಕ ದೃಢತೆಯಷ್ಟೆ ಶಾರೀರಿಕ ಚಟುವಟಿಕೆಗೆ ಆದ್ಯತೆ ನೀಡುವ ಸಲುವಾಗಿ ಸೌಂಡ್ ಬಾಡಿ ಎನ್ನುವ ಆಟದ ಮೈದಾನವನ್ನು 7 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ.
ಪರಶುರಾಮ ಕುಟೀರ!
ಪಠ್ಯದ ಕಲಿಕೆ ಜತೆಗೆ ಜೀವನ ಮೌಲ್ಯ ತಿಳಿಸುವ ಕಾರ್ಯವಾಗಬೇಕೆಂದು ಹುಟ್ಟಿಕೊಂಡ ಕುಟೀರ ಶಿಕ್ಷಣಕ್ಕೆ ಪೂರಕವಾಗಿ ಗುರುಕುಲ ಮಾದರಿಯ ಪರಶುರಾಮ ಕುಟೀರ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದೆ. ಮಕ್ಕಳು, ನೆಮ್ಮದಿ, ಶಾಂತಿ, ತಾಳ್ಮೆ ಮೂಲಕ ಪಾಠ, ಪ್ರವಚನ ಆಲಿಸಿ ಬದುಕು ರೂಪಿಸಲು ನಾಲ್ಕು ಗೋಡೆಗಳಿಂದ ಹೊರಬಂದು ಕಟೀರದೊಳಗೆ ತರಗತಿ ನಡೆಸಲಾಗುತ್ತದೆ.
ಮುಂದೆ ವೃತ್ತಿ ಶಿಕ್ಷಣಕ್ಕೆ ಪ್ರೋತ್ಸಾಹ
ಹೊಸ ಶಿಕ್ಷಣ ನೀತಿಯ ಆಶಯದಂತೆ ವೃತ್ತಿ ಶಿಕ್ಷಣ ಅಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಶಿಕ್ಷಕರಲ್ಲಿದೆ. ಟೈಲರಿಂಗ್, ಭರತನಾಟ್ಯ, ಸಂಗೀತಾ ಹೀಗೆ ಸ್ವ ಉದ್ಯೋಗಕ್ಕೆ ಪೂರಕವಾದ ಯೋಜನೆಗಳನ್ನು ಮುಂದೆ ಹಾಕಿಸಿಕೊಳ್ಳುವ ಚಿಂತನೆ ಇದೆ.
ಮೇಷ್ಟ್ರ ದೂರದೃಷ್ಟಿಗೆ ಕಾರಣವಾಯಿತು ಸೋಂಕು
ಕೋವಿಡ್-19 ಸೋಂಕು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಲಸಿಕೆ ನೀಡುವ ಮುನ್ನ ನಾಗರಿಕರು ಮೊರೆಹೋಗಿರತುವುದು ಭಾರತೀಯ ಪರಂಪರೆಯ ಆಯುರ್ವೇದಿಕಾ ಪದ್ಧಿತಿಗೆ. ಆಯುರ್ವೇದಿಕ್ ಬಳಕೆಯಿಂದ ಶಾರೀರಿಕ ದೃಢತೆ ಹೆಚ್ಚಳಕ್ಕೆ ಕಾರಣವಾಗಿತ್ತು. ಸರ್ವ ರೋಗಗಳಿಗೂ ಆಯುರ್ವೇದಿಕ ಔಷಧಿಗಳನ್ನೇ ಭಾರತೀಯರು ಅನುಸರಿಸುತ್ತಿದ್ದರು. ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ದೂರದೃಷ್ಠಿಯ ಕನಸ್ಸು ಕಂಡವರು ಇಲ್ಲಿನ ಶಾಲೆಯ ಮುಖ್ಯೋಪಾಧ್ಯಾಯ ನಾಗೇಶ್.
ಎಲ್ಲರ ಸಹಕಾರದಿಂದ ಸಾಧ್ಯ
ಶಾಲೆಯ ಎಲ್ಲ ಚಟುವಟಿಕೆಗೆ ಶಿಕ್ಷಣ ಇಲಾಖೆ, ಶಾಸಕರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಮಕ್ಕಳು, ಪೋಷಕರು ದಾನಿಗಳು, ಶಿಕ್ಷಣ ಪ್ರೇಮಿಗಳು ಸಹಕರಿಸುತ್ತ ಬಂದಿದ್ದು, ಎಲ್ಲರ ಸಹಕಾರದಿಂದ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗಿದೆ.-ನಾಗೇಶ್ ಮುಖ್ಯ ಶಿಕ್ಷಕರು
ಅಂಕಿಅಂಶ
- 1923ರಲ್ಲಿ ಶಾಲೆ ಸ್ಥಾಪನೆ
- 3 ಎಕರೆ ಜಾಗ ಶಾಲೆ ಹೊಂದಿದೆ
- 1 ರಿಂದ 7 ನೇ ತನಕ ಕಲಿಕೆಗೆ ಅವಕಾಶವಿದೆ
- 123 ಮಕ್ಕಳ ಸಂಖ್ಯೆಯಿದೆ
- 42 ಮಂದಿಗೆ ಆಪ್ಲೈನ್ ಪಾಠ
- 81 ಮಕ್ಕಳು ಆನ್ಲೈನ್ ಪಾಠ