ಮೂಲ್ಕಿ, ಮೇ 26 (DaijiworldNews/MS): ಫೇಸ್ಬುಕ್ನಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ ಕಾರಣಕ್ಕೆ ಬೇಕರಿಯಲ್ಲಿ ದಾಂಧಲೆ ನಡೆಸಿ, ಮಾಲೀಕನಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಐವರು ಯುವಕರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಮೂಲದ ಪ್ರಸ್ತುತ ಸುರತ್ಕಲ್ ನಲ್ಲಿ ನೆಲೆಸಿರುವ ಯುವಕ ಮುಲ್ಕಿಯ ಕಾರ್ನಾಡಿನಲ್ಲಿ ಐಶಾನಿ ಬೇಕರಿ ನಡೆಸುತ್ತಿದ್ದು, ಫೇಸ್ ಬುಕ್ ಖಾತೆಯಲ್ಲಿ ಇಸ್ರೇಲ್ ಘಟನೆ ಬಗ್ಗೆ ಸಂದೇಶ ಹಾಕಿ ಪ್ಯಾಲಿಸ್ತೇನ್ ಉಗ್ರರ ವಿರುದ್ದ ಕೈಗೊಂಡ ಕ್ರಮಗಳನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡ ಸ್ಥಳೀಯ ಯುವಕರ ಗುಂಪೊಂದು ಬೇಕರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಬೆದರಿಸಿ ಯುವಕನಿಂದ ಬಲವಂತವಾಗಿ ಕ್ಷಮೆ ಕೇಳುವ ವಿಡಿಯೋ ಮಾಡಿಸಿದ್ದಾರೆ.
ಇನ್ನು ವಿದೇಶದಿಂದಲೂ ಇಂಟರ್ ನೆಟ್ ಕರೆಗಳ ಮೂಲಕ ಬೆದರಿಕೆ ಹಾಕಲಾಗಿತ್ತು. ನಂತರ ಹಿಂದೂ ಸಂಘಟನೆಗಳ ಕೆಲವು ನಾಯಕರು ಬೇಕರಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ, ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿ ಪಣಂಬೂರು ಡಿಸಿಪಿ ಮುಂದೆ ಹಾಜರುಪಡಿಸಿದ್ದರು. ಬಳಿಕ ಷರತ್ತುಬದ್ದ ಜಾಮೀನು ಮಂಜೂರಾಗಿದೆ.
ಶಾಸಕ ಕೋಟ್ಯಾನ್ ಭೇಟಿ: ಬೇಕರಿಗೆ ಶಾಸಕ ಉಮನಾಥ್ ಕೋಟ್ಯಾನ್ ಹಾಗೂ ಇತರ ಸ್ಥಳೀಯ ಬಿಜೆಪಿ ಮುಖಂಡರು ಭೇಟಿ ನೀಡಿ , ಮೂಲ್ಕಿ ಪೊಲೀಸರಿಮ್ದ ಮಾಹಿತಿ ಪಡೆದು ಸೂಕ್ತ ತನಿಖೆಗೆ ಸೂಚಿಸಿದ್ದಾರೆ.