ಬೆಳ್ತಂಗಡಿ, ಮೇ 26 (DaijiworldNews/MS): ಇಲ್ಲಿನ ಚಾರ್ಮಾಡಿ ಬಳಿಯ ಮೃತ್ಯುಂಜಯ ನದಿ ಹಾದಿಯಲ್ಲಿ ಪಿಕಪ್ ವಾಹನವೊಂದು ದಾಟುತ್ತಿದ್ದ ವೇಳೆ ಏಕಾಏಕಿ ನೆರೆನೀರು ಉಕ್ಕಿ ಹರಿದ ಪರಿಣಾಮ ವಾಹನ ನೀರಿನಲ್ಲಿ ಮುಳುಗಿದ ಘಟನೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಘಟನೆ ಮೇ.25 ರ ಮಂಗಳವಾರ ಸಂಜೆ ನಡೆದಿದೆ.
ಅಳದಂಗಡಿ ಸದಾನಂದ ಎಂಬವರಿಗೆ ಸೇರಿದ ಪಿಕಪ್ ವಾಹನ ಇದಾಗಿದ್ದು ಇದರಲ್ಲಿ ಚಿಬಿದ್ರೆಯ ಎಂ.ಕೆ. ದಯಾನಂದ ಎಂಬುವರ ಮನೆಗೆ ನದಿ ಹಾದಿಯ ಮೂಲಕ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭ ನೀರು ಏಕಾಏಕಿ ಏರಿಕೆಯಾಗಿದೆ.
ಪಿಕಪ್ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯ ಅರಿತು ಭಯಭೀತರಾದ ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಇನ್ನೋರ್ವ ಬಾಗಿಲು ಭದ್ರಗೊಳಿಸಿ ಇಳಿದು ನದಿಯಿಂದ ಮೇಲೆ ಬಂದಿದ್ದಾರೆ. ಪಿಕಪ್ ಅಲ್ಲಿಯೇ ಸಿಲುಕಿಕೊಂಡಿದ್ದು, ಚಾಲಕ ದೂರವಾಣಿ ಕರೆ ಮಾಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ವಾಹನವನ್ನು ಹಗ್ಗದಿಂದ ಕಟ್ಟಿ ನೀರು ಪಾಲಾಗದಂತೆ ತಡೆದಿದ್ದಾರೆ. ಮುಳುಗಿರುವ ಪಿಕಪ್ನ್ನು ಹರಸಾಹಸಪಟ್ಟು ಸ್ಥಳೀಯ ಯುವಕರು ನೀರಿನಿಂದ ಮೇಲಕ್ಕೆತ್ತಿದ್ದಾರೆ.