ಉಡುಪಿ, ಮೇ 25 (DaijiworldNews/SM): ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟವರನ್ನು ಮನವೊಲಿಸುವುದರೊಂದಿಗೆ ಅವರನ್ನು ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸಿ, ಚಿಕಿತ್ಸೆ ನೀಡಲು ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಮುಂದಾಗಬೇಕು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಇಂದು ಮಣಿಪಾಲ್ನ ರಜತಾದ್ರಿಯ ಕೆಸ್ವಾನ್ ವೀಡಿಯೋ ಕಾನ್ಫ್ರೆನ್ಸ್ ಹಾಲ್ನಲ್ಲಿ ಕೋವಿಡ್ ನಿಯಂತ್ರಣ ಕುರಿತು ಉಡುಪಿ ಹಾಗೂ ಕಾಪು ತಾಲೂಕಿನ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.
ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಜನರ ಮನೆಗಳಲ್ಲಿ ಪ್ರತ್ಯೇಕವಾಗಿರಲು ಕೊಠಡಿ ಸೇರಿದಂತೆ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಗ್ರಾಮೀಣ ಜನರಿಗೆ ಸೋಂಕು ದೃಢಪಟ್ಟಾಗ ಅವರುಗಳ ರೋಗ ಲಕ್ಷಣದ ಬಗ್ಗೆ ಮಾಹಿತಿ ಹೊಂದಿ ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ವರ್ಗಾಯಿಸಬೇಕು. ತಪ್ಪಿದ್ದಲ್ಲಿ ಅವರುಗಳನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ವರ್ಗಾಯಿಸಿ, ಚಿಕಿತ್ಸೆ ನೀಡುವ ಕಾರ್ಯವನ್ನು ಗ್ರಾಮ ಮಟ್ಟದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕು ಎಂದರು.
ಕೋವಿಡ್ ಕೇರ್ ಸೆಂಟರ್ಗೆ ರೋಗ ಪೀಡಿತರು ಹೋಗಲು ಇಚ್ಛಿಸದೇ ಇದ್ದಲ್ಲಿ ಅಧಿಕಾರಿಗಳು ನಾವು ಹೇಳಿದ್ದೆವು, ಅವರು ಕೇಳಲಿಲ್ಲ ಎಂಬಂತಾಗದೇ ಕಠಿಣ ಕ್ರಮಗಳನ್ನು ಕೈಗೊಂಡು ಅವಶ್ಯವಿದ್ದಲ್ಲಿ ರಕ್ಷಣಾ ಇಲಾಖೆಯ ಸಹಾಯದೊಂದಿಗೆ ಅವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ವರ್ಗಾಯಿಸುವ ಕೆಲಸ ಮಾಡಬೇಕು ಎಂದರು.
ಗ್ರಾಮ ಪಡೆಯ ಸಮಿತಿಯ ಸದಸ್ಯರುಗಳು ಪ್ರತೀ ದಿನ ಸಭೆ ಸೇರಿ ಸ್ಥಳೀಯ ಸೋಂಕಿತರ ಬಗ್ಗೆ ಮಾಹಿತಿ ಹೊಂದುವುದರ ಜೊತೆಗೆ ನಿರ್ವಹಣೆ ಯಾವ ರೀತಿ ಮಾಡಬೇಕು ಎಂಬುದನ್ನು ಚರ್ಚಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಅವರುಗಳ ಮನೆ ಸೀಲ್ಡೌನ್ ಮಾಡಿ, ದೈನಂದಿನ ನಿರ್ವಹಣೆಗೆ ಅಗತ್ಯವಿದ್ದಲ್ಲಿ ಪಡಿತರವನ್ನು ಒದಗಿಸಬೇಕು. ಆಶಾ ಕಾರ್ಯಕರ್ತೆಯರು ಪ್ರತೀ ದಿನ ಮನೆಗೆ ತೆರಳಿ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಬೇಕು ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸೆಗೆ ತೆರಳುವವರು ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಅರ್ಹತೆಯಿರುವ ಬಡ ಜನರಿಗೆ ಅದರ ಸದುಪಯೋಗ ಪಡಿಸಿಕೊಳ್ಳುವ ಮಾಹಿತಿಯನ್ನು ನೀಡುವುದು ಟಾಸ್ಕ್ ಫೋರ್ಸ್ ಸಮಿತಿಯ ಜವಾಬ್ದಾರಿಯಾಗಿದ್ದು, ಇದನ್ನು ತಪ್ಪದೇ ಮಾಡಬೇಕು ಎಂದರು.