ಕುಂದಾಪುರ , ಮೇ 25 (DaijiworldNews/MS):"ಚರ್ಚ್ಗಳಲ್ಲಿ ಕೋವಿಡ್ ವ್ಯಾಕ್ಸಿನ್ ತಗೆದುಕೊಳ್ಳದಂತೆ ಅಪಪ್ರಚಾರ ಮಾಡುತ್ತಿರುವ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ" ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಕುಂದಾಪುರದ ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಕ್ಸಿಜನ್ ಪ್ಲಾಂಟ್ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು. "ಮೂಡುಗೆರೆ, ಆಲೂರು ಕಡೆ ಕೆಲವೊಂದು ಚರ್ಚ್ಗಳಲ್ಲಿ ಕೋವಿಡ್ ವ್ಯಾಕ್ಸಿನ್ ತಗೆದುಕೊಳ್ಳದಂತೆ ಅಪಪ್ರಚಾರ ಮಾಡುತ್ತಿರುವುದು ಕಂಡು ಬಂದಿದೆ. ಪ.ಜಾ., ಪ.ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಆ ಪ್ರದೇಶದಲ್ಲಿ ಮತಾಂತರದ ಪ್ರಕ್ರಿಯೆಗಳು ನಡೆಯುತ್ತದೆ. ಈಗಲೂ ನಾನು ನನ್ನ ಹೇಳಿಕೆಗೆ ಬದ್ದಳಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಆಕ್ಸಿಜನ್ ಪ್ಲಾಂಟ್ ವಿಚಾರವಾಗಿ ಮಾತನಾಡಿದ ಅವರು, " ಕುಂದಾಪುರದಲ್ಲಿ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಸುಮಾರು 5ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಸಿವಿಲ್ ಕಾಮಗಾರಿ ತಾಂತ್ರಿಕ ಅಡಚಣೆಯಿಂದ ವಿಳಂಭವಾಗಿದ್ದು ಜಿಲ್ಲಾಡಳಿತದ ನಿರ್ಮಾಣದ ಉಸ್ತುವಾರಿ ವಹಿಸಲಿದೆ. ಸಂಸದರ ನಿಧಿಯಿಂದ ಮೂರು ಲಕ್ಷವನ್ನು ನೀಡುತ್ತೇನೆ. ಇನ್ನು ಐಎಂಎಯವರು ಎರಡು ಲಕ್ಷ ನೀಡುತ್ತಾರೆ. ಹದಿನೈದು ದಿನಗಳೊಳಗೆ ಪೂರ್ಣಪ್ರಮಾಣದಲ್ಲಿ ಘಟಕ ಸಿದ್ಧವಾಗಬೇಕಾಗಿದ್ದು ಡಿಆರ್ಡಿಓಯವರು ಯಂತ್ರೋಪಕರಣಗಳನ್ನು ಒದಗಿಸುತ್ತಾರೆ. ರಾಜ್ಯದ 28 ಕಡೆ ಪೆಟ್ರೋಲಿಂ ಸಂಸ್ಥೆಯ ಅಧೀನದಲ್ಲಿ ಅಕ್ಸಿಜನ್ ಘಟಕಗಳು ನಡೆಯುತ್ತಿದ್ದು ಇಲ್ಲಿ ಗೇಲ್ ಸಂಸ್ಥೆ ನಿರ್ವಹಿಸಲಿದೆ. ಪೆಟ್ರೋಲಿಂ ಹಾಗೂ ಗೇಲ್ ಎರಡು ಸಂಸ್ಥೆಯ ಜೊತೆಗೂ ಸಂಪರ್ಕದಲ್ಲಿದ್ದು ಶೀಘ್ರ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.
ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಈ ಭಾಗದ ಪ್ರಮುಖ ಆಸ್ಪತ್ರೆಯಾಗಿದೆ. ಈ ಭಾಗದ ಹೆಚ್ಚು ಹೆರಿಗೆ ಈ ಆಸ್ಪತ್ರೆಯಲ್ಲಿ ಆಗುತ್ತದೆ. ಕೋವಿಡ್-19 ಸಂದರ್ಭದಲ್ಲಿ ಗರ್ಭಿಣಿಗೆ ಪಾಸಿಟಿವ್ ಇದ್ದರೆ ಪರಿಸ್ಥಿತಿ ನಿರ್ವಹಿಸುವುದು ವೈದ್ಯರಿಗೆ ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕಿಯರು, ವೈದ್ಯಕೀಯ ಸಿಬಂದಿಗಳು ಅಭಿನಂದನಾರ್ಹರು. ಗಡಿಯಲ್ಲಿರುವ ಸೈನಿಕರಂತೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ ಎಂದು ಹೊಗಳಿದ್ದಾರೆ.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ ಖಾರ್ವಿ, ಪಕ್ಷದ ಪ್ರಮುಖರಾದ ಸದಾನಂದ ಬಳ್ಕೂರು, ಮೋಹನದಾಸ ಶಣೈ,ಸಂಧ್ಯಾ ರಮೇಶ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಕೆ.ರಾಜು, ತಾಲೂಕು ವೈದ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ|ನಾಗೇಶ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.