ಕುಂದಾಪುರ, ಮೇ 25 (DaijiworldNews/MS): ಸುಮಾರು 13 ವರ್ಷಗಳ ಕಾಲ ತಂದೆಯಿಂದ ದೂರವಾಗಿದ್ದ ಬಾಲಕಿಗೆ ಲಾಕ್ ಡೌನ್ ನಡುವೆಯೂ ಪೊಲೀಸರ ಸ್ಪಂದನೆಯಿಂದ ತಂದೆಯನ್ನು ಭೇಟಿಯಾಗುವ ಅವಕಾಶ ಸೋಮವಾರ ಒದಗಿ ಬಂತು. ಶಿವಮೊಗ್ಗ ಜಿಲ್ಲೆಯ ಆಕೆಯನ್ನು ತಂದೆ ಬಳಿ ತಲುಪಿಸಲು ಕೊಲ್ಲೂರು ಪೊಲೀಸ್ ಠಾಣೆಯ ಎಸ್ಐ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಹಾಯ ಮಾಡಿದ್ದಾರೆ.
ಉಡುಪಿ ಮೂಲದ ದಂಪತಿಗಳು ಕೌಟಂಬಿಕ ಕಲಹದಿಂದ 13 ವರ್ಷಗಳಿಂದ ಬೇರೆಯಾಗಿದ್ದರು. ದಂಪತಿಯ ಇಬ್ಬರು ಮಕ್ಕಳು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ತಾಯಿ ಜೊತೆ ವಾಸವಾಗಿದ್ದರು. ಸೋಮವಾರ ಪಕ್ಕದ ಮನೆಯ ಪರಿಚಿತರೊಂದಿಗೆ ತಂದೆ ವಾಸವಿರುವ ಹೆಮ್ಮಾಡಿಗೆ ಹೋಗಬೇಕೆಂದು ಬರುವಾಗ 16 ವರ್ಷ ಬಾಲಕಿಯನ್ನು ಕೊಲ್ಲೂರು ಚೆಕ್ ಪೋಸ್ಟ್ನಲ್ಲಿ ತಡೆದಿದ್ದು, ಪ್ರಯಾಣದ ಬಗ್ಗೆ ವಿಚಾರಿಸಿದಾಗ, ತಂದೆ ಅಪಘಾತದಿಂದ ಕಾಲು ಮುರಿದುಕೊಂಡಿದ್ದು, ಅವರನ್ನು ನೋಡಲು, ತಾನು ತಾಯಿಯೊಡನೆ ಹೇಳದೆ ಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಆಕೆಯ ತಂದೆಯನ್ನು ಸಂಪರ್ಕಿಸಿ, ಮಾತಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಆಕೆಯ ಖುಷಿಗೆ ಪಾರವೇ ಇಲ್ಲ. ಪೊಲೀಸ್ ಅಧಿಕಾರಿಯಾಗುವ ಕನಸನ್ನು ಇಟ್ಟುಕೊಂಡಿರುವ ಆಕೆ ಪ್ರಸ್ತುತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದಾಳೆ.
ಪೊಲೀಸ್ ಠಾಣೆಯ ಎಸ್.ಐ ನಾಸೀರ್ ಹುಸೇನ್ ಅವರು, ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಠಾಣೆಗೆ ಭೇಟಿ ನೀಡಿದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಬಾಲಕಿಯನ್ನು ಸಮಾಲೋಚನೆಗೆ ಒಳಪಡಿಸಿದಾಗ, ಆಕೆ ತಂದೆಯನ್ನು ನೋಡಬೇಕೆಂದು ಹೇಳಿಕೊಂಡಿದ್ದಾಳೆ. ತಾಯಿಯೊಂದಿಗೆ ಇರಲು ಇಷ್ಟವಿಲ್ಲ ಎಂದು ಬಾಲಕಿ ಹೇಳಿರುವ ಕಾರಣ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಆದೇಶದಂತೆ 'ನಮ್ಮ ಭೂಮಿ ಕನ್ಯಾನ' ಸಂಸ್ಥೆಯಲ್ಲಿ ಆಕೆಗೆ ಪುನರ್ವಸತಿ ಕಲ್ಪಿಸಲಾಗಿದೆ.