ಬೆಳ್ಮಣ್, ಮೇ25 (DaijiworldNews/MS): ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆಯಾಗುವ ಪಡಿತರ ಅಕ್ಕಿಯಲ್ಲಿ ಮಿರಿ ಮಿರಿ ಮಿಂಚುವ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾದ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಬೆಳ್ಮಣ್ ಪಡಿತರ ಅಂಗಡಿಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.ಗ್ರಾಮಸ್ಥರು ಕೂಡಲೇ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪಂಚಾಯತಿಗೆ ಮಾಹಿತಿಯನ್ನು ನೀಡಿದ್ದು ಸೂಕ್ತ ಪರಿಶೀಲನೆ ನಡೆಸುವ ಭರವಸೆಯನ್ನು ನೀಡಿದ್ದಾರೆ .
ರಾಜ್ಯ ಸರಕಾರದ ಆಹಾರ ಇಲಾಖೆ ಮೂಲಕ ವಿತರಣೆಯಾಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ನೋಡಿದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಈ ಕುರಿತು ಕಾರ್ಕಳದ ಪಡಿತರ ಮುಖ್ಯ ಕೇಂದ್ರಕ್ಕೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗೆ ತಿಳಿಸಿದ ಪರಿಣಾಮ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ಕುರಿತು ಪರಿಶೀಲನೆ ಆರಂಭಿಸಿದ್ದಾರೆ ಎಂದು ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.ಅಲ್ಲದೇ ಈಗಾಗಲೇ ಅಕ್ಕಿಯನ್ನು ಕೊಂಡೋಗಿರುವ ಗ್ರಾಹಕರಿಗೆ ವಾಪಸ್ಸು ನೀಡುವಂತೆ ತಿಳಿಸಿದ್ದಾರೆ.
ಇನ್ನು ನ್ಯಾಯಬೆಲೆ ಅಂಗಡಿಗೆ ಕಾರ್ಕಳ ತಹಶಿಲ್ದಾರ್ ಪುರಂದರ್ ಹೆಗ್ಡೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಮಗ್ರ ತನಿಖೆ ಮಾಡುವ ಭರವಸೆಯನ್ನು ನೀಡಿದ್ದಾರೆ.