ಕಡಬ, ಮೇ25 (DaijiworldNews/MS): ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಅಲ್ಯೂಮಿನಿಯಂ ಸಲಾಕೆಯೂ ವಿದ್ಯುತ್ ತಂತಿಗೆ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಮೇ 24 ರ ಸೋಮವಾರ ನಡೆದಿದೆ.
ಮೃತ ಯುವಕನನ್ನು ತಾಲೂಕಿನ ಕುಟ್ರುಪ್ಪಾಡಿ ಬಡಬೆಟ್ಟುವಿನ ತಂಗಚ್ಚನ್ ಅವರ ಪುತ್ರ ಪಿ ಎಂ ಲಿಜು (35) ಎಂದು ಗುರುತಿಸಲಾಗಿದೆ.
ಬೆಳಗ್ಗೆ ತನ್ನ ಮನೆಯ ಮುಂಭಾಗದ ತೆಂಗಿನ ಮರದಿಂದ ಅಲ್ಯೂಮಿನಿಯಂ ಕೋಲಿನ ಸಹಾಯದಿಂದ ತೆಂಗಿನಕಾಯಿಗಳನ್ನು ಕೀಳುತ್ತಿರುವಾಗ, ತೆಂಗಿನಕಾಯಿಯ ಭಾರವನ್ನು ತಡೆಯಲಾಗದೆ ಕೊಕ್ಕೆಯು ನಿಯಂತ್ರಣ ಕಳೆದುಕೊಂಡು ಅಲ್ಲೇ ಪಕ್ಕದಲ್ಲಿ ಹಾದು ಹೋದ ಹೈಟೆಂಷನ್ ವಿದ್ಯುತ್ ತಂತಿಯ ಮೇಲೆ ಬಿದ್ದಿತು. ಅಲ್ಯೂಮಿನಿಯಂ ಕೊಕ್ಕೆಯಾದ್ದರಿಂದ ತಕ್ಷಣವೇ ಯುವಕನಿಗೆ ತೀವ್ರ ಸ್ವರೂಪದ ವಿದ್ಯುತ್ ಆಘಾತ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಸಚಿವ ಎಸ್.ಅಂಗರ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮೃತರಿಗೆ ಅಂತಿಮ ನಮನ ಸಲ್ಲಿಸಿ ದುಃಖಿಸುತ್ತಿರುವ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಮತ್ತು ಕಡಬ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಸಿ ಪಿ ಸಿಲ್ಮನ್ ಉಪಸ್ಥಿತರಿದ್ದರು.