ಕುಂದಾಪುರ, ಮೇ.24 (DaijiworldNews/HR): "ಕೊರೊನಾ ನಿರ್ವಹಣೆಯಲ್ಲಿ ಎಲ್ಲರೂ ಸಾಂಘಿಕವಾಗಿ ಕೆಲಸ ಮಾಡುತ್ತಿದ್ದಾರೆ. ಜನರೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರಕ್ಕೆ ತುರ್ತಾಗಿ ಆಶಾಕಾರ್ಯಕರ್ತೆರಿಗೆ ನೀಡಲು ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನಿಂಗ್ ಶಾಸಕರ ನಿಧಿಯ ಅನುದಾನದಿಂದ ಖರೀದಿಸಲಾಗುವುದು. ಜೊತೆಗೆ 100 ಬೆಡ್ಗಳ ಕೊರೊನಾ ಕೇರ್ ಸೆಂಟರ್ ಸನ್ನದ್ದಗೊಳಿಸಲಾಗುವುದು" ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಕೊರೊನಾ ನಿರ್ವಹಣೆಯ ಕುರಿತು ಸಭೆ ನಡೆಸಿ ಮಾತನಾಡಿದ ಅವರು, "ಜನತೆ ಯಾವುದೇ ಕಾರಣಕ್ಕೂ ಜವಾಬ್ದಾರಿಯಿಂದ ಮೈಮರೆಯ ಬಾರದು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಎಚ್ಚರಿಕೆಯಿಂದ ಇರಬೇಕು" ಎಂದರು.
ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ 37ಪಂಚಾಯಿತಿ, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಟಾಸ್ಕ್ ಪೋರ್ಸ್ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ಪರಿಣಾಮಕಾರಿಯಾಗಿ ನಿರ್ಭಂಧಿಸಲು ಕ್ರಮಗಳನ್ನು ಕೈಗೊಳ್ಳಿ, ಅಗತ್ಯ ಸಹಕಾರವನ್ನು ಸರಕಾರ ಹಾಗೂ ದಾನಿಗಳ ಮೂಲಕ ಕೊಡಿಸಲಾಗುವುದು" ಎಂದಿದ್ದಾರೆ.
ಇನ್ನು ದಿನಕ್ಕೆ 480ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದ್ದು, ಪಾಸಿಟಿವಿಟಿ ಪ್ರಮಾಣ 24 ಆಗಿದೆ. ಕೋವಿಡ್ ಲಕ್ಷಣ ಇರುವವರು, ಹಾಗೂ ಈಗಾಗಲೇ ಪಾಸಿಟಿವ್ ಇದ್ದವರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ. ಕುಂದಾಪುರ ಕ್ಷೇತ್ರದಲ್ಲಿ ಎಪ್ರಿಲ್ 1ರಿಂದ 21 ಸಾವು ಸಂಭವಿಸಿದೆ. ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 14 ಸಾವು ಸಂಭವಿಸಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಕೊರೊನಾ ನಿರ್ಭಂಧಿಸುವಲ್ಲಿ ಪಾಸಿಟಿವ್ ಇರುವ ಮನೆಗಳಿಗೆ ಪಟ್ಟಿ ಕಟ್ಟುವುದು, ಮನೆ ಆರೈಕೆಯಲ್ಲಿ ಇದ್ದವರು ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ಬರಲು ಒಪ್ಪದಲ್ಲಿ ಪೊಲೀಸರ ಸಮ್ಮುಖದಲ್ಲಿ ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಲಾಯಿತು.
ಕುಂದಾಪುರದ ಸರ್ಕಾರಿ ಕೊರೊನಾ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿದ ಕೊರೊನಾ ನೋಡೆಲ್ ಅಧಿಕಾರಿ ಡಾ.ನಾಗೇಶ್, "ಕುಂದಾಪುರ ಸರ್ಕಾರಿ ಕೊರೊನಾ ಆಸ್ಪತ್ರೆಯಲ್ಲಿ 95 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಐಸಿಯುನಲ್ಲಿದ್ದಾರೆ. ಒಬ್ಬರು ವೆಂಟಿಲೆಟರ್ನಲ್ಲಿದ್ದಾರೆ. ಈ ತನಕ 708 ಜನ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ" ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಕೆ.ರಾಜು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಡಿವೈಎಸ್ಪಿ ಶ್ರೀಕಾಂತ್, ಉಡುಪಿ ಸುಧಾಕರ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಹಶೀಲ್ದಾರರು ಉಪಸ್ಥಿತರಿದ್ದರು.