ಉಡುಪಿ, ಮೇ 24 (DaijiworldNews/MS): ಜಿಲ್ಲೆಯಲ್ಲಿ ವಿವಾಹಗಳು ಕೋವಿಡ್ ಹರಡುವ ತಾಣವಾಗುತ್ತಿರುವುದರಿಂದ ಮೇ. 25 ರ ಬಳಿಕ ಜೂನ್ 7 ರವರೆಗೆ ಮದುವೆಗಳಿಗಾಗಿ ಯಾವುದೇ ಹೊಸ ಅನುಮತಿ ನೀಡಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ,ಹಾಗೂ ಶಾಸಕರೊಂದಿಗೆ ನಡೆದ ವಿಡಿಯೋ ಕಾನ್ಪರೆನ್ಸ್ ಸಭೆ ಬಳಿಕ ಜಿಲ್ಲಾಧಿಕಾರಿಗಳು ಈ ನಿರ್ಧಾರವನ್ನು ಪ್ರಕಟಿಸಿದ್ದು, ಕೊರೊನಾ ನಿಯಂತ್ರಿಸಲು ಮುಂದಿನ 15 ದಿನಗಳು ನಿರ್ಣಾಯಕವಾಗಿದ್ದು, ಮದುವೆ ಕಾರ್ಯಕ್ರಮಗಳನ್ನು ಮುಂದೂಡಿ ಎಂದು ಜಿಲ್ಲೆಯ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಇಂದು ಸಂಜೆ ಮದುವೆಗಾಗಿ ಅನುಮತಿ ಪಡೆಯಲು ಕೊನೆಯ ದಿನವಾಗಿದ್ದು, ಮೇ 25 ರ ಬಳಿಕ ಅನುಮತಿ ನೀಡಲಾಗುವುದಿಲ್ಲ ಈಗಾಗಲೇ ವಿವಾಹಕ್ಕಾಗಿ ಅನುಮತಿ ಪಡೆದವರು ಸಮಾರಂಭ ನಡೆಸಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಹೋಮ್ ಐಸೋಲೇಶನ್ ನಲ್ಲಿ ಇದ್ದವರನ್ನು ಭೇಟಿ ಆದಾಗ ಮೆಹಂದಿ, ಮದುವೆ , ಮತ್ತಿತರ ಸಮಾರಂಭದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರಲ್ಲಿ ಕೊರೊನಾ ಸೋಂಕು ಕಂಡುಬರುತ್ತಿದೆ. ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೋದವರಲ್ಲೂ ಸೋಂಕು ಕಂಡು ಬಂದಿದೆ. ವಿವಾಹ ಸಮಾರಂಭ ಕೊವೀಡ್ ಹರಡುವಿಕೆಯ ತಾಣವಾಗುತ್ತಿದೆ. ಹೀಗಾಗಿ ನಿಗದಿತ ವಿವಾಹಗಳನ್ನು ದಯವಿಟ್ಟು ಮುಂದೂಡಬೇಕೆಂದು ಜನರನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಮದುವೆ ನೆಪದಲ್ಲಿ ಎಂಗೇಜ್ ಮೆಂಟ್, ಮೆಹಂದಿ ಕಾರ್ಯಕ್ರಮ ಕೂಡಾ ನಡೆಸುವಂತಿಲ್ಲ. ಒಂದು ವೇಳೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಿರುದ್ದ ಕೂಡಾ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಇನ್ನು ಬೇಗ ಕೆಡಬಹುದಾದ ವಸ್ತುಗಳು ಇರುವುದರಿಂದ ಬೇಕರಿ ಮಾಲೀಕರು ಅಂಗಡಿಗಳನ್ನು ತೆರೆಯುವಂತೆ ವಿನಂತಿಸಿರುವುದರಿಂದ, ಮೇ-೨೬ ರ ಈ ಬುಧವಾರ ಬೆಳಿಗ್ಗೆ 6-10 ಗಂಟೆಗೆ ಬೇಕರಿಗಳನ್ನು ತೆರೆಯಬಹುದಾಗಿದೆ. ಚಂಡಮಾರುತದ ಪರಿಣಾಮದಿಂದಾಗಿ ಹಾಗೂ ಜನರ ಅನೇಕ ವಿದ್ಯುತ್ ಉಪಕರಣಗಲು ಕೆಟ್ಟು ಹೋಗಿದೆ. ಈ ಉದ್ದೇಶಕ್ಕಾಗಿ ಬುಧವಾರ ಎಲೆಕ್ಟ್ರಿಕಲ್ ಉಪಕರಣಗಳ ರಿಪೇರಿಗಾಗಿ ಎಲೆಕ್ಟ್ರಿಕಲ್ ಅಂಗಡಿಗಳನ್ನು ಬುಧವಾರ ಬೆಳಿಗ್ಗೆ 6-10 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಜೂನ್ 7 ರವರೆಗೆ ಜಿಲ್ಲೆಯಲ್ಲಿ ಕಠಿಣ ಕ್ರಮ ಜಾರಿಗೊಳಿಸಲಾಗಿದ್ದು, ಸಿಗರೇಟ್, ಬಿಸ್ಕಿಟ್ ಎಂದು ಕುಂಟು ನೆಪ ಹೇಳಿ ನಗರ ಪ್ರವೇಶಿಸುವಂತಿಲ್ಲ, ಒಂದು ವೇಳೆ ಅನಗತ್ಯ ಸಂಚಾರ ನಡೆಸಿದರೆ ಮುಲಾಜಿಲ್ಲದೆ ವಾಹನ ಮುಟ್ಟುಗೋಲು ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.