ಕಾಸರಗೋಡು,ಮೇ 24 (DaijiworldNews/MS): ಪ್ರತ್ಯೇಕ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟ ಘಟನೆ ಮೇ. 24 ರ ಭಾನುವಾರ ರಾತ್ರಿ ನಡೆದಿದೆ. ಮೃತ ಯುವಕರನ್ನು ಬದಿಯಡ್ಕ ಕನ್ಯಾನ ದ ಅಬ್ದುಲ್ ರಜಾಕ್ (32) ಹಾಗೂ ಕೊರಕ್ಕೋಡ್ ಬಿಲಾಲ್ ನಗರದ ಮುಹಮ್ಮದ್ ಶಕೀರ್ (21) ಎಂದು ಗುರುತಿಸಲಾಗಿದೆ.
ಮುಹಮ್ಮದ್ ಶಕೀರ್ , ಅಬ್ದುಲ್ ರಜಾಕ್
ಬೈಕ್ ಗಳ ನಡುವೆ ಢಿಕ್ಕಿ:
ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಗಲ್ಫ್ ಉದ್ಯೋಗಿ ಮೃತಪಟ್ಟ ಘಟನೆ ಬದಿಯಡ್ಕ ದಲ್ಲಿ ನಡೆದಿದೆ. ಓರ್ವ ಗಂಭೀರ ಗಾಯಗೊಂಡಿದ್ದಾರೆ. ಬದಿಯಡ್ಕ ಕನ್ಯಾನ ದ ಅಬ್ದುಲ್ ರಜಾಕ್ ( 32) ಮೃತಪಟ್ಟವರು. ಇನ್ನೋರ್ವ ಸವಾರ ಕುಂಬ್ಡಾಜೆ ಯ ಸಂಜೀವ ( 25) ಗಂಭೀರ ಗಾಯಗೊಂಡಿದ್ದು , ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಬದಿಯಡ್ಕ ಸಮೀಪದ ಪಿಲಾಂಕಟ್ಟೆ ಮಿಲ್ಲ್ ಸಮೀಪ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕೊಂಡೊಯ್ದರೂ ರಜಾಕ್ ಅವರ ಜೀವ ಉಳಿಸಲಾಗಲಿಲ್ಲ . ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಕೂಟರ್, ರಿಕ್ಷಾ, ಕಾರಿನ ನಡುವೆ ಸರಣಿ ಅಪಘಾತ:
ಸ್ಕೂಟರ್ , ಆಟೋರಿಕ್ಷಾ ಹಾಗೂ ಕಾರಿನ ನಡುವೆ ಉಂಟಾದ ಸರಣಿ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ವಿದ್ಯಾನಗರದಲ್ಲಿ ನಡೆದಿದೆ. ಕೊರಕ್ಕೋಡ್ ಬಿಲಾಲ್ ನಗರದ ಮುಹಮ್ಮದ್ ಶಕೀರ್ (21) ಮೃತಪಟ್ಟ ಯುವಕ. ಭಾನುವಾರ ಸಂಜೆ ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಆಟೋರಿಕ್ಷಾ ಬಡಿದಿದ್ದು , ನಿಯಂತ್ರಣ ತಪ್ಪಿದ ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದಿದ್ದು , ಗಂಭೀರ ಗಾಯಗೊಂಡ ಶಕೀರ್ ರರನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು . ಅಪಘಾತಕ್ಕೆ ಕಾರಣವಾದ ಆಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡಿದ್ದು , ಕಾರು ನಿಲ್ಲಿಸದೆ ಪರಾರಿಯಾಗಿದೆ. ಗಲ್ಫ್ ಉದ್ಯೋಗಿಯಾಗಿದ್ದ ಶಕೀರ್ ಕೆಲ ಸಮಯದ ಹಿಂದೆ ಊರಿಗೆ ಬಂದು ಕಾಸರಗೋಡು ನಗರದಲ್ಲಿ ಮೊಬೈಲ್ ಸರ್ವಿಸ್ ಮಳಿಗೆಯನ್ನು ಆರಂಭಿಸಿದ್ದರು. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ