ಕಾರ್ಕಳ, ಮೇ.23 (DaijiworldNews/HR): "ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸುವುದು, ಸೋಂಕಿತರನ್ನು ಕೊರೊನಾ ಕೇರ್ ಸೆಂಟರ್ಗೆ ಸೇರ್ಪಡೆಗೊಳಿಸುವುದು, 94ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೆಂಚ್ಯೂರೇಶನ್ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗುವುದರೊಂದಿಗೆ ಕೊರೊನಾ ಸೋಂಕನ್ನು ತಡೆಗಟ್ಟುವ ಮೂಲಕ ಮಾನವನ ಜೀವ ಉಳಿಸಲು ಸಾಧ್ಯವಾಗುತ್ತದೆ" ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೇಮಿರಾಜ್ ಅರಿಗ ನೇತೃತ್ವದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಸುದ್ದಿಗಳ ಪೈಪೋಟಿಯ ವೇಗದಲ್ಲಿ ನೈಜ ವಿಚಾರವನ್ನು ಮರೆಯಾಗಬಾರದು. ಸುದ್ದಿ ನೀಡುವ ಮಾಧ್ಯಮ ಮಿತ್ರರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ತಾಲೂಕಿನಲ್ಲಿ ನಾಗರಿಕರ ಆರೋಗ್ಯ ಹಿತ ದೃಷ್ಠಿಯಿಂದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ತಾಲೂಕು ಆಡಳಿತ ಮುಂದಾಗಿದೆ" ಎಂದರು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ಮಾತನಾಡಿ, "ವಿದ್ಯುತ್, ರಸ್ತೆ ಹಾಗೂ, ನೀರಾವರಿ ವ್ಯವಸ್ಥೆಗಳು ಒಂದು ತಾಲೂಕಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತದೆ. ಆರೋಗ್ಯ ಕಾಪಾಡುವುದು ನಾಗರಿಕರ ಹಾಗೂ ಸರಕಾರದ ಹೊಣೆಯಾದರೆ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪ್ರಮುಖ ಪಾತ್ರ ಮಹತ್ವದಾಗಿದೆ" ಎಂದು ಅಭಿಮತ ವ್ಯಕ್ತಪಡಿಸಿದರು.
ಕರ್ನಾಟಕ ಗೇರು ನಿಗಮ ಮಂಡಳಿಯ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, "ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಪರಿಗಣಿಸಲಾಗಿರುವ ಮಾಧ್ಯಮದ ಹೊಣೆಗಾರಿಕೆ ದೊಡ್ಡದಾಗಿದೆ. ವಸ್ತು-ನಿಷ್ಠ ವರದಿಯಿಂದ ಇದು ಸಾಧ್ಯ" ಎಂದರು.
ತಹಸಿಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, "ಮಾಹಿತಿಯ ಸೂಕ್ಷ್ಮತೆಯನ್ನು ಅರಿತುಕೊಂಡು ವರದಿ ಪ್ರಕಟ ಹಾಗೂ ಪ್ರಸಾರಗೊಂಡಾಗ ಬಹು ಜನಪಯೋಗವಾಗಲಿದೆ. ಸರಕಾರ ನಿಯಮಗಳು ಪ್ರತಿಯೊಬ್ಬ ನಾಗರಿಕ ಪರಿಪಾಲನೆ ಮಾಡಿದಾಗ ಅದರಿಂದ ಹೆಚ್ಚು ಪ್ರಯೋಜನ ವಾಗಲಿದೆ. ಮಾನವ ಧರ್ಮವೇ ಶೇಷ್ಠ" ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹರಿ ಪ್ರಸಾದ್ ನಂದಳಿಕೆ, ತಾಲೂಕು ಘಟಕದ ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ ಉಪಸ್ಥಿತರಿದ್ದರು.