ಕಾರ್ಕಳ, ಮೇ.23 (DaijiworldNews/PY): ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷ ನೆಮೀರಾಜ್ ಅರಿಗ ಅವರಿಂದ ಕಾರ್ಕಳದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರಿಗೆ ಕಿಟ್ ವಿತರಣಾ ಸಮಾರಂಭ ಇಂದು ನಡೆಯಿತು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷ ನೆಮೀರಾಜ್ ಅರಿಗ ಮಾತನಾಡಿ, "ವಿದ್ಯುತ್, ರಸ್ತೆ ಹಾಗೂ, ನೀರಾವರಿ ವ್ಯವಸ್ಥೆಗಳು ಒಂದು ತಾಲೂಕಿನ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದರಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ" ಎಂದರು.
ಶಾಸಕ ವಿ ಸುನೀಲ್ ಕುಮಾರ್ ಮಾತನಾಡಿ, "ಕೊರೊನಾ ಮುಕ್ತ ತಾಲೂಕ್ಕಾಗಿ ಪರಿವರ್ತಿಸಲು ಮೂರು ಅಂಶಗಳ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಲ್ಲಿ ಅಳವಡಿಸಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿ ಹಾಗೂ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ, ಕೊರೊನಾ ಕೇರ್ ಸೆಂಟರ್ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯ" ಎಂದರು.
ಕಾರ್ಕಳ ತಾಲೂಕು ತಹಸಿಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, "ವೃತ್ತಿ ಧರ್ಮ ಪಾಲಿಸಿಕೊಂಡು ಕೊರೊನಾವನ್ನು ನಿಯಂತ್ರಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದರು.
ಗೇರು ಮಂಡಳಿಯ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ವರದಿಗಳ ಮೂಲಕ ಎಚ್ಚರಿಸುವ ಕಾರ್ಯ ಹಾಗೂ ಜಾಗೃತಿ ಮೂಡಿಸುವ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಹರಿ ಪ್ರಸಾದ್ ನಂದಳಿಕೆ, ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಷರೀಫ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಧನ್ಯವಾದ ಸಲ್ಲಿಸಿದರು.