ಮಂಗಳೂರು, ಮೇ 22 (DaijiworldNews/SM): ಬುದ್ಧಿವಂತರ ಜಿಲ್ಲೆ ಎಣಿಸಿಕೊಂಡಿರುವ ದ.ಕ. ಜಿಲ್ಲೆಯಲ್ಲಿ ಮತ್ತೆ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ವಿಕೃತ ಯುವಕರ ತಂಡವೊಂದು ಮೂಖ ಪ್ರಾಣಿ ನಾಯಿಯನ್ನು ಬೈಕ್ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಮೇರಿಹಿಲ್ ನಲ್ಲಿ ಈ ಘಟನೆ ನಡೆದಿದ್ದು, ಬೈಕ್ನಲ್ಲಿ ಇಬ್ಬರು ಸವಾರರು ಪ್ರಯಾಣಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ, ವಿಕೃತರು ನಾಯಿಯನ್ನು ಬೈಕ್ ಹಿಂಭಾಗಕ್ಕೆ ಕಟ್ಟಿ ಎಳೆದೊಯ್ಯುತ್ತಿರುವ ವೀಡಿಯೋ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆ ಬದಿಯ ವಸತಿ ಸಮುಚ್ಚಯವೊಂದರ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ. ವಿಕೃತ ಯುವಕರ ಅಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನಾಗರಿಕ ವರ್ತನೆ ತೋರಿರುವ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬರುತ್ತಿವೆ.