ಕುಂದಾಪುರ, ಮೇ.22 (DaijiworldNews/HR): ಕೊರೊನಾದ ಎರಡನೇ ಅಲೆಯ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಕುಂದಾಪುರ ಸಿಟಿಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆ, ದಾನಿಗಳ ಸಹಭಾಗಿತ್ವದಲ್ಲಿ ಊಟ ನೀಡಲಾಗುತ್ತಿದ್ದು, ಶನಿವಾರ 25ನೇ ದಿನವನ್ನು ಪೂರೈಸಿದೆ.
ಕುಂದಾಪುರದ ವಿವಿಧ ಭಾಗಗಳಲ್ಲಿ ಊಟ ಸಿಗದೆ ಇದ್ದವರಿಗೆ ಉಚಿತ ಊಟವನ್ನು ನೀಡುವ ಕಾರ್ಯ ಮಧ್ಯಾಹ್ನ ಹಾಗೂ ಸಂಜೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಈ ಮಾನವೀಯ ನೆಲೆಯಲ್ಲಿ ಮಾಡಿಕೊಂಡು ಬರುತ್ತಿದ್ದು, ಸರಕು ಸಾಗಾಣಿಕೆ ವಾಹನಗಳ ಚಾಲಕ-ನಿರ್ವಾಹಕರು, ವಲಸೆ ಕಾರ್ಮಿಕರು, ಭಿಕ್ಷುಕರು ಮೊದಲಾದವರಿಗೆ ಕಳೆದ 25 ದಿನಗಳಿಂದ ದಿನಕ್ಕೆ ಸುಮಾರು 200ರಿಂದ 250 ಜನರಿಗೆ ಊಟ ನೀಡುತ್ತಿದೆ.
ಈ 25 ದಿನಗಳಲ್ಲಿ ಕುಂದಾಪುರ, ಕೋಟೇಶ್ವರ ಭಾಗದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿ ಜನರಿಗೆ ಊಟವನ್ನು ನೀಡಿದ್ದು, ಅನ್ನ, ಸಾರು, ಸಾಂಬಾರು, ಉಪ್ಪಿನಕಾಯಿ, ಪಲ್ಯ, ನೀರು, ಎರಡು ದಿನಕ್ಕೊಮ್ಮೆ ಪಾಯಸವನ್ನು ನೀಡಲಾಗುತ್ತದೆ. ಪ್ರೀತಿ ಅಕ್ಕರೆಯಿಂದ ಊಟವನ್ನು ನೀಡಲಾಗುತ್ತದೆ. ವಲಸೆ ಕಾರ್ಮಿಕರು, ಭಿಕ್ಷಕರಿದ್ದರೆ ಅವರ ಯೋಗಕ್ಷೇಮವನ್ನು ವಿಚಾರಿಸಲಾಗುತ್ತದೆ. ಸ್ವಚ್ಛತೆ, ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಅತಂತ್ರಕ್ಕೆ ಸಿಲುಕಿದವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.
25ನೇ ದಿನದ ಲಾಕ್ಡೌನ್ನ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ರೆಡ್ಕ್ರಾಸ್ ಸಂಸ್ಥೆಯ ಸೀತಾರಾಮ ನಕ್ಕತ್ತಾಯ ಅವರ ಪ್ರಾಯೋಜಕತ್ವದಲ್ಲಿ ಕುಂದಾಪುರ ಪರಿಸರದಲ್ಲಿ ಸುಮಾರು 210 ಕ್ಕಿಂತಲೂ ಹೆಚ್ಚು ಹಸಿದವರಿಗೆ ಊಟವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಶ್ರೀಧರ್ ಸುವರ್ಣ, ಉಪಾಧ್ಯಕ್ಷ ಅಭಿಲಾಷ್, ಜೇಸಿರೇಟ್ ಅಧ್ಯಕ್ಷೆ ಡಾ. ಸೋನಿ, ಜೇಸಿರೇಟ್ ಕಾರ್ಯದರ್ಶಿ ಡಾ. ಅಶ್ವತಿ, ಇಂಡಿಯನ್ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ವೈ.ಸೀತಾರಾಮ ಶೆಟ್ಟಿ, ಸದ್ಯಸ್ಯರಾದ ಗಣೇಶ್ ಆಚಾರ್ಯ, ನಾರಾಯಣ ಕುಂದಾಪುರ ಸೀತಾರಾಮ ನಕ್ಕತ್ತಾಯ ಉಪಸ್ಥಿತರಿದ್ದರು.
ಕಳೆದ ವರ್ಷ 42 ದಿನಗಳ ಕಾಲವೂ ಕುಂದಾಪುರ, ಕೋಟೇಶ್ವರ ಭಾಗದಲ್ಲಿ ಇದೇ ಸೇವೆಯನ್ನು ನೀಡಿದೆ. ಸುಮಾರು 9500 ಜನರಿಗೆ ಊಟ ನೀಡಿದೆ. ಅಷ್ಟೇ ಅಲ್ಲ, ರೇಷನ್ ಕಿಟ್, ಮಾಸ್ಕ್ ಗ್ಲೌಸ್ ಸಹಿತ ಹಲವಾರು ಅಗತ್ಯ ವಸ್ತುಗಳನ್ನು ನೀಡಿತ್ತು. ಶಿರೂರುವಿನಿಂದ ಆರಂಭಿಸಿ ಹೆಬ್ರಿ ತನಕ ಮೆಡಿಸಿನ್ ಕಳುಹಿಸುವ ವ್ಯವಸ್ಥೆ ಮಾಡಿತ್ತು. ಅದೇ ರೀತಿ ಈ ವರ್ಷವೂ ಕೂಡಾ ಲಾಕ್ ಡೌನ್ ಮಾದರಿಯ ಕರ್ಫ್ಯೂ ಸಂದರ್ಭದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದೆ.