ಉಡುಪಿ, ಮೇ.22 (DaijiworldNews/PY): "ಕೊರೊನಾ ಎರಡನೇ ಅಲೆ ಬಂದು ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಬಿಜೆಪಿ ಸರಕಾರ ಪ್ರತಿ ಭಾರಿ ಕರಾವಳಿ ಭಾಗದಲ್ಲಿ ಮೀನುಗಾರರನ್ನು ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್ನಂತೆ ಬಳಸಿ ಇಂದಿನ ಕೊರೊನಾ ಅತಿ ಸಂಕಷ್ಟದ ಸಮಯದಲ್ಲಿ ಮರೆತುಬಿಟ್ಟಿರುವುದು ಅಕ್ಷಮ್ಯ ಅಪರಾಧವಾಗಿದೆ" ಎಂದು ನಗರಸಭಾ ಪ್ರತಿಪಕ್ಷದ ನಾಯಕ ರಮೇಶ್ ಕಾಂಚನ್ ಹೇಳಿದ್ದಾರೆ.
"ರಾಜ್ಯದ ಎಲ್ಲಾ ಜನರ ಹಾಗೆ ಮೀನುಗಾರರೂ ಇವತ್ತು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದು ಈಗಾಗಲೇ ಮತ್ಸ್ಯಕ್ಷಾಮದಿಂದ ಬಾಳುತ್ತಿರುವ ಮೀನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳು ಹಾಗೂ ಮತ್ಯೋಧ್ಯಮಗಳಿಗೆ ಇವತ್ತು ಲಾಕ್ಡೌನ್ನಿಂದ ಗಾಯದ ಮೇಲೆ ಭರೆ ಎಳೆದಂತೆ ಆಗಿದೆ" ಎಂದಿದ್ದಾರೆ.
"ಕರಾವಳಿ ಭಾಗದ ಮೂರೂ ಸಂಸದರು ಬಿಜೆಪಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಅವಳಿ ಜಿಲ್ಲೆಯಲ್ಲಿ 13ರಲ್ಲಿ 12 ಬಿಜೆಪಿ ಶಾಸಕರನ್ನು ಗೆಲ್ಲಿಸುವಲ್ಲಿ ಮೀನುಗರಾರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೂ ಇಂತಹ ಕಠಿಣ ಸಂದರ್ಭದಲ್ಲಿ ಇವರಿಗೆ ಸಹಾಯ ಮಾಡದೆ ಬಿಜೆಪಿ ಸರಕಾರ ಮಹಾದ್ರೋಹ ಎಸಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೇಂದ್ರಕ್ಕೆ 25 ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳಿಸಿದರೂ ರಾಜ್ಯಕ್ಕೆ ನಿರಂತರ ಮಲತಾಯಿ ಧೋರಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರ, ಮೊನ್ನೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ನಷ್ಟವನ್ನು ಉಂಟು ಮಾಡಿರುವ ಚಂಡಮಾರುತವು ಬೇರೆ ರಾಜ್ಯಗಳಲ್ಲೂ ಹಾನಿ ಮಾಡಿರುತ್ತೆ. ಆದರೆ ದೇಶದ ಪ್ರಧಾನಿ ಯವರು ಕೇವಲ ಗುಜರಾತ್ಗೆ ಸಾವಿರ ಕೋಟಿ ಪರಿಹಾರ ಘೋಷಿಸಿರುವುದು ಕೇಧಕರವಾಗಿದೆ. ಕರಾವಳಿ ಭಾಗಕ್ಕೆ ಚಂಡಮಾರುತದಿಂದ ಆದ ನಷ್ಟವನ್ನು ವೀಕ್ಷಿಸಲು ಬಂದ ಸಚಿವ ಅಶೋಕ್ ಅವರು ಜನರ ಕಷ್ಟವನ್ನು ಆಲಿಸದೇ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ" ಎಂದಿದ್ದಾರೆ.
"ನಮ್ಮ ಜಿಲ್ಲೆಯ ಜನಪ್ರತಿನಿಧಿನಗಳು ಈ ತಾರತಮ್ಯವನ್ನು ಪ್ರಶ್ನಿಸದೆ ವಿಷಯಾಂತರ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ನಗರಸಭಾ ಪ್ರತಿಪಕ್ಷದ ನಾಯಕ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.