ಮಂಗಳೂರು, ಮೇ.22 (DaijiworldNews/HR): ಕೊರೊನಾ ಮಹಾಮಾರಿ ಒಂದನೇ ಅಲೆ ಮತ್ತು ಎರಡನೇ ಅಲೆಯನ್ನು ತಡೆಯುವಲ್ಲಿ ಮತ್ತು ನಿಭಾಯಿಸುವಲ್ಲಿ ಬಿಜೆಪಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ದೇಶದ್ಯಾದಂತ ಜನ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಂತಹ ಸಂದರ್ಭದಲ್ಲಿ ಜನರ ಗಮನವನ್ನ ಬೇರೆ ಕಡೆ ಸೆಳೆಯಲು ಬಿಜೆಪಿ ಪಕ್ಷ ಮೋದಿಜಿಯವರ ವರ್ಚಸ್ಸನ್ನು ಕುಗ್ಗಿಸಲು ಕಾಂಗ್ರೆಸ್ ಟೂಲ್ ಕಿಟ್ ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ, ಮ.ನ.ಪಾ ಹಾಗೂ ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಜೆಪಿ ವೈಫಲ್ಯವನ್ನು ಮರೆ ಮಾಚಲು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಪಕ್ಷ ಮಾಡಿದ ನಕಲಿ ಟೂಲ್ ಕಿಟ್ ಇದಾಗಿದ್ದು, ಕೇಂದ್ರದ ಅಧೀನದಲ್ಲಿ ವಿವಿಧ ತನಿಖಾ ಸಂಸ್ಥೆಗಳು ಇರುವಾಗ ನಿಜವಾಗಿಯೂ ಕಾಂಗ್ರೆಸ್ ಪಕ್ಷ ಈ ರೀತಿ ಮಾಡಿದ್ದರೆ ಯಾಕೆ ಆರೋಪಿಗಳನ್ನು ಬಂಧಿಸಿಲ್ಲ. ಟಿವಿ ಮಾಧ್ಯಮಗಳು ಮತ್ತು ಸಮಾಜಿಕ ಜಾಲತಾಣಗಳ ಮುಖಾಂತರ ಇಂತಹ ಸುಳ್ಳು ಸುದ್ದಿಯನ್ನು ಹರಿಯಬಿಟ್ಟು ದೇಶದ ಪ್ರಸ್ತುತ ನೈಜ್ಯ ವಾಸ್ತವಾಂಶವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಸ್ವತಂತ್ರ ಭಾರತದ ಯಾವೊಬ್ಬ ಪ್ರಧಾನಿಯೂ ವಿರೋಧ ಪಕ್ಷದ ವಿರುದ್ಧ ವಿದೇಶಗಳಿಗೆ ಹೋಗಿ ಆರೋಪ ಮಾಡಿದ ಚರಿತ್ರೆ ಇಲ್ಲ. ಇಂತಹ ಚರಿತ್ರೆ ಇದ್ದಲ್ಲಿ ಅದು ನರೇಂದ್ರ ಮೋದಿಯವರಿಗೆ ಮಾತ್ರ" ಎಂದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಲ್ಲಾ ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರಗಳನ್ನು ಮಂಗಳೂರು ಶಾಸಕರಾದ ವೇದವ್ಯಾಸ್ ಕಾಮತ್ ರವರು ಬಿಜೆಪಿ ಪಕ್ಷದ ಕಚೇರಿಗಳನ್ನಾಗಿ ಮಾರ್ಪಡಿಸಿದ್ದಾರೇ ಎಂಬ ಸಂಶಯ ಬರುತ್ತಿದ್ದು, ಲಸಿಕೆ ಟೋಕನ್ ಗಳನ್ನು ಶಾಸಕ ವೇದವ್ಯಾಸ್ ಕಾಮತ್ ರವರ ಚೇಲಾಗಳು ಮತ್ತು ಬಿಜೆಪಿ ಮ.ನ.ಪಾ ಸದಸ್ಯರುಗಳು ಅವರ ಜನರಿಗೆ ಬೇಕಾಬಿಟ್ಟಿ ನೀಡುವುದರ ಮೂಲಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತುಟಿ ಬಿಚ್ಚುತ್ತಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರಗಿಸಿಲ್ಲ. ಅವರು ಬಿಜೆಪಿ ಏಂಜಟರಂತೆ ವರ್ತಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಾಪತ್ತೆ ಆಗಿದ್ದಾರೆ. ಎಲ್ಲಾ ಜನರನ್ನು ಸಮಾನವಾಗಿ ಕಾಣಬೇಕಾದ ಇಲ್ಲಿಯ ಶಾಸಕರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ" ಎಂದಿದ್ದಾರೆ.
ಇನ್ನು "ಜಿಲ್ಲೆಗೆ ಸಾಕಷ್ಟು ಲಸಿಕೆ ತರಿಸುವ ಕೆಲಸ, ವೆಂಟಿಲೇಟರ್ ಹೆಚ್ಚಿಸುವ ಕೆಲಸ, ಆಕ್ಸಿಜನೇಟ್ ಹೆಚ್ಚಿಸುವ ಆಕ್ಸಿಜನ್ ಕ್ವಾನ್ಸಂಟ್ರೇಟರ್ ಸರಕಾರದ ವತಿಯಿಂದ ಕೊರೊನಾ ರೋಗಿಗಳಿಗೆ ಕೊಡಿಸುವ ಬಗ್ಗೆ ಮತ್ತು ಬಡ ಜನರಿಗೆ ಆಹಾರದ ಕಿಟ್ ಗಳನ್ನು ಸರಕಾರದ ವತಿಯಿಂದ ಕೊಡಿಸುವ ಕೆಲಸ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಪ್ಯಾಕೇಜ್ ಕೊಡಿಸುವ ಕೆಲಸ ಇತ್ಯಾದಿ ಮಾಡುವ ಬದಲು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಇಲ್ಲಿಯ ಬಿಜೆಪಿ ಶಾಸಕರುಗಳು ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳಾರೋಪ ಹೊರಿಸಿ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಿರುವುದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ" ಎಂದರು.
"ದೇಶದಲ್ಲಿ ಉತ್ದಾದಿಸಿದ ಎಲ್ಲಾ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡಿದ್ದೇ ಎಲ್ಲಾ ಅವಾಂತರಗಳಿಗೆ ಕಾರಣವಾಗಿದ್ದು, ಬೇರೆ ಬೇರೆ ಲಸಿಕಾ ಕಂಪೆನಿಗಳಿಗೆ ಲಸಿಕೆಯನ್ನು ತರಾರಿಸಲು ಕೇಂದ್ರ ಸರಕಾರ ಅನುಮತಿ ನೀಡಲು ನಿರಾಕರಿಸಿದ್ದು ಕೂಡ ಲಸಿಕಾ ಕೊರತೆಗೆ ಕಾರಣವಾಗಿದೆ. ಅವರ ವೈಫಲ್ಯನ್ನು ಮರೆ ಮಾಚಲು ನಳಿನ್ ಕುಮಾರ್ ಕಟೀಲ್ ಮತ್ತು ವೇದವ್ಯಾಸ್ ಕಾಮತ್ ಕಾಂಗ್ರೆಸ್ ಪಕ್ಷದ ಹೆಸರನ್ನು ಕೆಡಿಸಲು ಸ್ಥಳೀಯ ನಕಲಿ ಟೂಲ್ ಕಿಟನ್ನು ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್ ಕುಮಾರ್ ದಾಸ್, ಮಹಾಬಲ ಮಾರ್ಲ, ಶಾಹುಲ್ ಹಮೀದ್, ಮ.ನ.ಪ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಪೂಜಾರಿ, ಪ್ರಕಾಶ್ ಬಿ.ಸಾಲ್ಯಾನ್, ಶಭೋದಯ ಆಳ್ವ, ಅಪ್ಪಿ, ಸಂಶುದ್ದೀನ್, ಆರೀಫ್ ಬಾವಾ, ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.