ಕುಂದಾಪುರ, ಮೇ.22 (DaijiworldNews/PY): ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು ತಮ್ಮ ಮನೆಯ ಗೃಹ ಪ್ರವೇಶೋತ್ಸವ ಸರಳವಾಗಿ ನಡೆಸಿ ಉಳಿದ ಹಣದಲ್ಲಿ ಕುಂದಾಪುರ ಸರಕಾರಿ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತುರ್ತು ಅಗತ್ಯ ಔಷಧಗಳನ್ನು ಕೊಡುಗೆಯಾಗಿ ನೀಡಿದರು.
ಸುಮಾರು 50 ಸಾವಿರ ರೂ. ಮೌಲ್ಯದ ಔಷಧಗಳನ್ನು ಶನಿವಾರ ಕುಂದಾಪುರ ಸರಕಾರಿ ಕೊರೊನಾ ಆಸ್ಪತ್ರೆಯ ಕೊರೊನಾ ನೋಡೆಲ್ ಅಧಿಕಾರಿ ಡಾ.ನಾಗೇಶ್ ಅವರಿಗೆ ಹಸ್ತಾಂತರಿಸಿದರು.
ಕೊಡುಗೆ ಸ್ವೀಕರಿಸಿ ಮಾತನಾಡಿದ ಡಾ.ನಾಗೇಶ್, "ತುರ್ತು ಅಗತ್ಯವಿರುವ ಜೀವರಕ್ಷಕ ಔಷಧಗಳನ್ನು ನೀಡಿದ್ದಾರೆ. ಪ್ರದೀಪ್ ಶೆಟ್ಟಿ ಅವರ ಸೇವಾ ಮನೋಭಾವ ಇನ್ನಷ್ಟು ಸಹೃದಯಿ ದಾನಿಗಳಿಗೆ ಪ್ರೇರಣೆಯಾಗಲಿ. ಅವರು ಈ ಹಿಂದೆಯೂ ಕೂಡಾ ಇಂತಹ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ. ಕುಂದಾಪುರದಲ್ಲಿ ಸಹೃದಯಿ ದಾನಿಗಳ ಸಂಖ್ಯೆ ಹೆಚ್ಚಿದೆ. ಕೊರೊನಾದ ಈ ಸಂದರ್ಭದಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಇಂಥಹ ಕೊಡುಗೆಗಳು ಆನೇಕರ ಜೀವ ಉಳಿಸುತ್ತದೆ. ಮತ್ತೆ ಕೊಡುಗೆ ನೀಡುವವರಿಗೆ ಉತ್ತೇಜನವಾಗುತ್ತದೆ" ಎಂದರು.
ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿ, "ಕುಂದಾಪುರ ಕೊರೊನಾ ಆಸ್ಪತ್ರೆಯಲ್ಲಿ ಡಾ.ನಾಗೇಶ್ ನೇತೃತ್ವದ ವೈದ್ಯರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸಾರ್ವಜನಿಕ ಸಹಭಾಗಿತ್ವ ದೊರೆತಾಗ ಇನ್ನಷ್ಟು ಉತ್ತಮ ಸೇವೆ ಸಿಗಲು ಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಕಳೆದ ಒಂದು ವಾರದಿಂದ ವಿವಿಧೆಡೆಗಳಿಂದ ತುರ್ತು ಅಗತ್ಯ ಔಷಧಗಳನ್ನು ಖರೀದಿಸಿ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತಿದೆ. ಇತ್ತೀಚೆಗೆ ನನ್ನ ನೂತನ ಮನೆಯ ಪ್ರವೇಶೋತ್ಸವ, ಕೊರೊನಾ ಕಾರಣದಿಂದ ಅತೀ ಸರಳವಾಗಿ ನಡೆಯಿತು. ಯಾವುದೇ ದುಂದುವೆಚ್ಚ ಆಗಲಿಲ್ಲ. ಆ ಹಣದಿಂದ ಕೊರೊನಾ ರೋಗಿಗಳಿಗೆ ಅನುಕೂಲವಾಗಲಿ ಎನ್ನುವ ನೆಲೆಯಲ್ಲಿ ಅಗತ್ಯ ಔಷಧಗಳನ್ನು ನೀಡಲು ತೀರ್ಮಾನಿಸಿದೆ ಎಂದರು.
ಈ ಸಂದರ್ಭ ಡಾ.ವಿಜಯ ಶಂಕರ್, ಅಂಪಾರು ಗ್ರಾಮ ಪಂಚಾಯತ್ ಸದಸ್ಯ ಗಣೇಶ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.