ಕೋಟ, ಮೇ.22 (DaijiworldNews/PY): ಕಾನೂನು ಬಾಹಿರವಾಗಿ ಮಗುವೊಂದನ್ನು ದತ್ತು ಪಡೆದ ದಂಪತಿ, ನೀಡಿದ ದಂಪತಿ, ಪ್ರಕರಣದಲ್ಲಿ ಭಾಗಿಯಾದ ಮಧ್ಯವರ್ತಿಗಳು, ವೈದ್ಯಾಧಿಕಾರಿಗಳ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕರಣ ದಾಖಲಿಸಿದೆ.
ಸಾಂದರ್ಭಿಕ ಚಿತ್ರ
ಹಂಗರಕಟ್ಟೆಯ ಫಯಾಜ್ ಶಾಹಿಸ್ತಾ ಎಂಬವರಿಗೆ ಉಡುಪಿಯ ಹುಸೈನ್ ಎಂಬಾತನ ಮೂಲಕ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ ಹೆರಿಗೆ ಆದ ಹೆಣ್ಣು ಮಗುವನ್ನು ಸ್ವಂತ ತಂದೆ ತಾಯಿ ಸುರೇಶ ಹಾಗೂ ಸುಕನ್ಯಾ ಎನ್ನುವವರು ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ಅವರ ನೆರವು ಪಡೆದು ದತ್ತು ನೀಡಿದ್ದರು.
ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಾಹಿತಿಯನ್ನು ಆಧರಿಸಿ ಉಡುಪಿ ಜಿಲ್ಲಾ ತಂಡವು ಕೋಟ ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ.
ವಿಚಾರಣೆಯ ಸಂದರ್ಭ ಶಾಹಿಸ್ತ ಅವರು, "ನಾನು ಫಯಾಝ್ ಅವರನ್ನು ವಿವಾಹವಾಗಿ 10 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆ 80 ಸಾವಿರ ರೂ. ಹಾಗೂ ಆಸ್ಪತ್ರೆಯ ಬಿಲ್ ನೀಡಿ ಮಗುವನ್ನು ಪಡೆದು ಸಲಹುತ್ತಿದೆ. ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ನೆರವಿನಿಂದ ಜನನ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದೇವೆ" ಎಂದು ಒಪ್ಪಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ದ ಬಾಲನ್ಯಾಯ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿದೆ. 1.2 ವರ್ಷದ ಹೆಣ್ಣು ಮಗುವನ್ನು ಕಾನೂನು ಬಾಹಿರ ದತ್ತು ಪಡೆದವರಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ನಿರ್ದೇಶನದಂತೆ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ .ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ .ಕೋಟಾ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ. ಪಿ., ಸಹಾಯಕ ಉಪ ನಿರೀಕ್ಷಕಿ ಮುಕ್ತಾ ಭಾಗವಹಿಸಿದ್ದರು.
ಕೊರೊನಾದಿಂದ ಮಕ್ಕಳ ತಂದೆ ತಾಯಿ ಇಬ್ಬರು ಮೃತರಾದಲ್ಲಿ ಮಕ್ಕಳು ಅನಾಥವಾಗಿದ್ದು, ದತ್ತು ಪಡೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮೋಸ ಹೋಗದಿರಿ. ಕಾನೂನು ಬದ್ದ ದತ್ತು ಬೇಕಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಜತಾದ್ರಿ ಮಣಿಪಾಲ ಅಥವಾ ಮಕ್ಕಳ ಕಲ್ಯಾಣ ಸಮಿತಿ ಉಡುಪಿ ಇಲ್ಲವೇ www.cara.nic.in ಜಾಲತಾಣವನ್ನು ಸಂಪರ್ಕಿಸಬಹುದೆಂದು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.