ಕಾರ್ಕಳ, ಮೇ.21 (DaijiworldNews/PY): ಕಾಂಗ್ರೆಸ್ ಪಕ್ಷದ ಮುಖಂಡರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ನಾಲ್ಕು ಗೋಡೆಗಳ ಮಧ್ಯೆ ಕುಳಿತು ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಆರೋಪಿಸಿದರು.
ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರೇ ಇಲ್ಲದೇ ಕಂಗಾಲು ಆಗಿರುವ ಕಾಂಗ್ರೆಸ್ ಪಕ್ಷದ ಬೆರಳೆಣಿಕೆಯ ನಾಯಕರು ತಮ್ಮ ಇರುವಿಕೆಯನ್ನು ಗೊತ್ತುಪಡಿಸುವ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಹೇಳಿಕೆಗಳಿಂದ ಅದು ರುಜುವಾಗತೊಡಗಿದೆ ಎಂದರು.
"ಶಾಸಕ ವಿ ಸುನೀಲ್ ಕುಮಾರ್ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಕಾರ್ಕಳ, ಹೆಬ್ರಿ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ನಿರ್ಮಿಸುವಲ್ಲಿ ಅವರ ಪಾತ್ರ ಮಹತ್ವದಾಗಿದೆ. ಕೊರೊನಾದ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಸುಮಾರು 600 ಮಂದಿ ಕಾರ್ಯಕರ್ತರು ಆಹೋರಾತ್ರಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿ, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದಾರೆ" ಎಂಬ ಮಾಹಿತಿಯನ್ನು ಮಹಾವೀರ ಹೆಗ್ಡೆ ನೀಡಿದರು.
ಈ ಸಂದರ್ಭ, ಕರ್ನಾಟಕ ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪಕ್ಷದ ವಕ್ತಾರ ಮುಟ್ಲುಪ್ಪಾಡಿ ಸತೀಶ್ ಶೆಟ್ಟಿ, ಮುಖಂಡರಾದ ನವೀನ್ ನಾಯಕ್, ಜಯರಾಮ ಸಲ್ಯಾನ್, ಹರ್ಷವರ್ಧನ್ ಉಪಸ್ಥಿತರಿದ್ದರು.