ಮಂಗಳೂರು, ಮೇ.21 (DaijiworldNews/PY): "ಕಾಂಗ್ರೆಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು. ಆದರೆ, ಜನರು ಬುದ್ಧಿವಂತರಾಗಿದ್ದಾರೆ. ಕಾಂಗ್ರೆಸ್ನ ನೀಚ ರಾಜಕಾರಣವನ್ನು ಜನತೆ ಸರಿಯಾಗಿ ಅರ್ಥೈಸಿಕೊಂಡಿದ್ದಾರೆ" ಎಂದು ಶಾಸಕ ಕಾಮತ್ ಹೇಳಿದ್ದಾರೆ.
"ದೇಶವು ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ನೀಡಿರುವ ಟೂಲ್ ಕಿಟ್ ಒಂದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಬಲಿಗೊಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಳೆದ 70 ವರ್ಷಗಳ ಕಾಲ ಜನರನ್ನು ವಂಚಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್ ತನ್ನ ಹಳೇ ಚಾಳಿಯನ್ನು ಬಿಟ್ಟಿಲ್ಲ" ಎಂದು ಕಿಡಿಕಾರಿದ್ದಾರೆ.
"ದೇಶ ಸಂಕಟದಲ್ಲಿರುವ ಸಂದರ್ಭವನ್ನು ಉಪಯೋಗಿಸಿಕೊಂಡು ಬಿಜೆಪಿ ವಿರೋಧಿ ಅಲೆ ಹುಟ್ಟಿಸುವುದಕ್ಕಾಗಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಿಗಿಡಲು ಸ್ಥಳೀಯ ಬುದ್ಧಿಜೀವಿಗಳನ್ನು, ಸಾಮಾಜಿಕ ಜಾಲತಾಣಗಳನ್ನು, ಜಾಗತಿಕ ಮಟ್ಟದಲ್ಲಿ ಕೆಲವೊಂದು ಮಾಧ್ಯಮಗಳ ಮೂಲಕ ಸುಳ್ಳು ಸುದ್ಧಿಗಳನ್ನು ಬಿತ್ತರಿಸಿ ಜನರಲ್ಲಿ ಭೀತಿ ಹುಟ್ಟಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಅದಕ್ಕಾಗಿ ಬೆಡ್ ಬ್ಲಾಕಿಂಗ್ ಮಾಡಿಸುವಂತೆ ಟೂಲ್ ಕಿಟ್ನಲ್ಲಿ ಉಲ್ಲೇಖಿಸಿರುವುದು ಕಾಂಗ್ರೆಸ್ನ ನೀಚ ರಾಜಕೀಯದ ಭಾಗವಾಗಿದೆ. ಕಾಂಗ್ರೆಸ್ನ ಈ ಪ್ರಮಾಣವನ್ನು ದೇಶ ಎಂದೆಂದಿಗೂ ಕ್ಷಮಿಸುವುದಿಲ್ಲ" ಎಂದು ಹೇಳಿದ್ದಾರೆ.
"ಕೊರೊನಾ ನಿಯಂತ್ರಣಕ್ಕಾಗಿ 100 ಕೋಟಿ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿರುವುದು ಅವರ ಪಕ್ಷದ ಹಣವನ್ನಲ್ಲ. ಶಾಸಕರಿಗೆ, ಸಂಸದರಿಗೆ ನೀಡುವ ಅನುದಾನವನ್ನು ಸ್ವತಃ ಪಕ್ಷದ ವತಿಯಿಂದ ಕೊಡುತ್ತಿರುವಂತೆ ಅಗ್ಗದ ಪ್ರಚಾರ ಪಡೆಯುತಿದ್ದಾರೆ. ಈಗಾಗಲೇ ಬಿಜೆಪಿಯ ಶಾಸಕರು ಸಂಸದರು ತಮ್ಮ ಅನುದಾನವನ್ನು ಕೊರೊನಾ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ತಮ್ಮ ವೈಯಕ್ತಿಕ ಹಣ ನೀಡಿದಂತೆ ಡಂಗೂರ ಸಾರುತಿದ್ದಾರೆ" ಎಂದು ಹೇಳಿದ್ದಾರೆ.
"ಕೊರೊನಾ ಲಸಿಕೆಯ ಕುರಿತು ಕೇವಲ ರಾಜಕೀಯ ದುರುದ್ಧೇಶದಿಂದ ಅಪಪ್ರಚಾರ ಮಾಡಿರುವ ಕಾಂಗ್ರೆಸ್ ಮುಖಂಡರೇ ಇಂದಿನ ಈ ಪರಿಸ್ಥಿತಿಗೆ ಮೂಲ ಕಾರಣ. ಭಾರತದಲ್ಲಿ ಲಸಿಕೆ ಕಂಡುಹಿಡಿದ ಸಂದರ್ಭದಲ್ಲಿ ಗುಣಮಟ್ಟದ ಕುರಿತು ತಾವೇ ತಜ್ಞರಂತೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡರು ಅದರ ಪರಿಣಾಮದ ಕುರಿತು ಆಲೋಚಿಸುವಷ್ಟು ಪ್ರಬುದ್ಧರಾಗಿಲ್ಲವೇ. ಮೊದಲ ಹಂತದಲ್ಲಿ ಡಿ ಗ್ರೂಪ್ ನೌಕರರಿಗೆ ಲಸಿಕೆ ನೀಡಿದಾಗ ಪ್ರಧಾನಿ ಮೊದಲು ಲಸಿಕೆ ಪಡೆಯಬೇಕಿತ್ತು ಎನ್ನುವ ಕಾಂಗ್ರೆಸ್ ಮುಖಂಡರು ಪ್ರಧಾನಿ ಲಸಿಕೆ ಪಡೆದಾಗ ಜನತೆಗೆ ಲಸಿಕೆ ನೀಡದೆ ಪ್ರಧಾನಿ ಲಸಿಕೆ ಪಡೆಯುತ್ತಿದ್ದಾರೆ ಎಂದು ಅಪ್ರಬುದ್ಧರಂತೆ ಹೇಳಿಕೆ ನೀಡುತ್ತಿದ್ದಾರೆ. ಲಸಿಕೆಯ ಬಗ್ಗೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ ಈಗ ತೇಪೆಹಚ್ಚುವ ಕೆಲಸ ಮಾಡುತಿದ್ದಾರೆ" ಎಂದಿದ್ದಾರೆ.
"ಭಾರತದ ಲಸಿಕೆಯನ್ನು ಬೇರೆ ದೇಶಗಳಿಗೆ ನೀಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಪ್ರಾರಂಭಿಸುವ ಕಾಂಗ್ರೆಸ್ ಮುಖಂಡರು ಜನರು ಲಸಿಕೆ ಪಡೆಯಲು ಹಿಂದೇಟು ಹಾಕಲು ಮೂಲ ಕಾರಣ ಯಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ದೇಶದಲ್ಲಿ ಲಸಿಕೆ ಕಂಡುಹಿಡಿದ ಸಂದರ್ಭದಲ್ಲಿ ರಾಜಕೀಯ ದುರುದ್ಧೇಶದಿಂದ ಕಾಂಗ್ರೆಸ್ಸಿಗರು ಮಾಡಿದ ಅಪಪ್ರಚಾರದಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತಿದ್ದರು. ಆ ಸಂದರ್ಭದಲ್ಲಿ ಲಸಿಕೆಯ ಸಿಂಧುತ್ವ ಕೊನೆಗೊಳ್ಳುವ ಮೊದಲು ಅನ್ಯ ಮಾರ್ಗವಿಲ್ಲದೆ ಬೇಡಿಕೆಯಿರುವ ದೇಶಗಳಿಗೆ ನೀಡಲಾಗಿದೆ. ಇದನ್ನು ಅನೇಕ ವೈದ್ಯರು ಒಪ್ಪಿಕೊಂಡಿದ್ದಾರೆ. ಇವೆಲ್ಲದರ ನೈತಿಕ ಹೊಣೆಗಾರಿಕೆಯಿಂದ ಕಾಂಗ್ರೆಸ್ಸಿಗರು ಜನತೆಯ ಬಳಿ ಕ್ಷಮೆಯಾಚಿಸಬೇಕು" ಎಂದು ಹೇಳಿದ್ದಾರೆ.
"ಜನರನ್ನು ಲಸಿಕಾ ಕೇಂದ್ರಗಳಿಗೆ ತೆರಳದಂತೆ ವಿವಿಧ ರೀತಿಯ ಹೇಳಿಕೆಯನ್ನು ನೀಡಿ, ಸ್ವತಃ ಕಾಂಗ್ರೆಸ್ ಮುಖಂಡರು ಲಸಿಕೆ ಪಡೆದಿದ್ದಾರೆ. ಕಂಡವರ ಮಕ್ಕಳನ್ನು ಬಾವಿಗೆಸೆದು ಆಳ ನೋಡುವ ಬದಲು ತಾವೇ ಯಾಕೆ ಬಾವಿಗೆ ಹಾರಬಾರದು" ಎಂದು ಹೇಳಿದ್ದಾರೆ.