ಮೂಡುಬಿದಿರೆ: 'ಲಾಕ್ಡೌನ್ನಿಂದ ಜವಳಿ ಉದ್ಯಮಕ್ಕೆ ತೊಂದರೆ' - ಜವಳಿ ಉದ್ಯಮಿ ಮನವಿ ಮಾಡಿದ ವಿಡಿಯೋ ವೈರಲ್
Fri, May 21 2021 04:45:14 PM
ಮೂಡುಬಿದಿರೆ, ಮೇ.21 (DaijiworldNews/PY): ಲಾಕ್ಡೌನ್ ಪರಿಣಾಮ ಕಂಗಲಾಗಿರುವ ಜವಳಿ ವ್ಯಾಪಾರಿಗಳ ಪರವಾಗಿ ಮೂಡುಬಿದಿರೆ ಜವಳಿ ವರ್ತಕರ ಸಂಘದ ಕಾರ್ಯದರ್ಶಿ ಸದಾಶಿವ ರಾವ್ ನೆಲ್ಲಿಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಸಲ್ಲಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಶಾಸಕರಿಗೆ ಮನವಿ ಮಾಡಿರುವ ಸದಾಶಿವ ರಾವ್ ನೆಲ್ಲಿಮಾರ್ ಅವರು, "ರಾಜ್ಯ ಸರ್ಕಾರದ ಲಾಕ್ಡೌನ್ ಒಂದು ನಿರ್ದಿಷ್ಟ ವಿಭಾಗದ ವ್ಯಾಪಾರಿಗಳನ್ನು ಸಮಾಧಾನಪಡಿಸುವಂತಿದೆ. ಈ ಹಿನ್ನೆಲೆ ಜವಳಿ ವ್ಯಾಪಾರಿಗಳಿಗೆ ನಷ್ಟವಾಗಿದೆ. ಕನಿಷ್ಟ ವಾರದಲ್ಲಿ ಎರಡು ದಿನವಾದರೂ ಜವಳಿ ಮಳಿಗೆಗಳ ಬಾಗಿಲು ತೆರೆಯಲು ಅವಕಾಶ ಮಾಡಿಕೊಡಿ" ಎಂದಿದ್ದಾರೆ.
"ನಾವು ಸೀಸನ್ಗೆ ಆಧಾರಿತವಾಗಿ ಹೆಚ್ಚಿ ಸ್ಟಾಕ್ ಅನ್ನು ಸಂಗ್ರಹಿಸಿದ್ದೇವೆ. ಫ್ಯಾಶನ್ ಹಳೆಯದಾದರೆ ಗ್ರಾಹಕರು ಬಟ್ಟೆ ಖರೀದಿಸುವುದಿಲ್ಲ. ನಂತರ ನಾವು ಬಟ್ಟೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ನಮಗೆ ನಷ್ಟವಾಗುತ್ತದೆ. ಕಳೆದ ವರ್ಷವೂ ಕೊರೊನಾದಿಂದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಿಲ್ಲ. ಕೊರೊನಾ ಸಮಸ್ಯೆಯಿಂದಾಗಿ, ರಂಜಾನ್ ಸಂದರ್ಭ ಜನರು ಬಟ್ಟೆ ಖರೀದಿಸಿಲ್ಲ" ಎಂದಿದ್ದಾರೆ.
ಕಳೆದ ವರ್ಷ ಕೊರೊನಾದ ಮೊದಲ ಅಲೆಯ ವೇಳೆ ಕೆಲವು ಮಾಧ್ಯಮಗಳು ಹಾಗೂ ರಾಜಕೀಯ ಪಕ್ಷಗಳು ತಬ್ಲೀಘಿಗಳಿಂದ ದೇಶಕ್ಕೆ ಕೊರೊನಾ ಹರಡಲು ಕಾರಣ ಎಂದು ಆರೋಪಿಸಿದ್ದರು. ಹಾಗಾಗಿ ರಂಜಾನ್ ಸಂದರ್ಭ ಮುಸ್ಲಿಂಮರು ಬಟ್ಟೆ ಖರೀದಿಸಿಲ್ಲ. ಇದರಿಂದಾಗಿ ದೇಶಕ್ಕೆ 1000 ಕೋಟಿ ರೂ. ಜಿಎಸ್ಟಿ ನಷ್ಟವಾಗಿದೆ. ಕೊರೊನಾ ಹಾಗೂ ಸರ್ಕಾರ ಕೈಗೊಂಡ ತೀರ್ಮಾನದಿಂದ ಮಧ್ಯಮ ವರ್ಗದ ಬಟ್ಟೆ ವ್ಯಾಪಾರಿಗಳಿಗೆ ಸಂಕಷ್ಟವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾವಿರರು ಮಂದಿ ನಿರುದ್ಯೋಗಿಗಳಾಗಿದ್ದಾರೆ. ನನ್ನ ಅಂಗಡಿಯಲ್ಲಿ ನನ್ನೊಂದಿಗೆ ಇದ್ದ 18 ಮಂದಿಯ ಪೈಕಿ ಈಗ 5 ಮಂದಿ ಮಾತ್ರವೇ ಇದ್ದಾರೆ. ವ್ಯಾಪಾರವಿಲ್ಲದ ಕಾರಣ ಬ್ಯಾಂಕ್ ಸಾಲ ಪಾವತಿಸಲು ಹಾಗೂ ಮನೆ ವೆಚ್ಚ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದಿದ್ದಾರೆ.