ಮಂಗಳೂರು, ಮೇ.21 (DaijiworldNews/PY): "ಮನಪಾ ವ್ಯಾಪ್ತಿಯ ಮನೆಗಳು ಹಾಗೂ ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ತಾಜ್ಯಗಳನ್ನು ಪೌರ ಕಾರ್ಮಿಕರಿಗೆ ನೀಡುವ ಮುನ್ನ ಹಸಿ ಕಸ ಮತ್ತು ಒಣ ಕಸ ವಿಂಗಡಿಸಬೇಕು" ಎಂದು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮನಪಾ ವ್ಯಾಪ್ತಿಯ ಮನೆಗಳು ಹಾಗೂ ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ತಾಜ್ಯಗಳನ್ನು ಮೂಲದಲ್ಲಿಯೇ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವುದು ಕಡ್ಡಾಯ" ಎಂದಿದ್ದಾರೆ.
"ಪಾಲಿಕೆ ವ್ಯಾಪ್ತಿಯೊಳಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಮೂಲದಲ್ಲಿಯೇ ಕಸ ವಿಂಗಡಿಸದೆ ನೀಡದಿರುವುದರಿಂದ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಸ ವಿಂಗಡಿಸುವ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ನೈರ್ಮಲ್ಯ ಕಾರ್ಮಿಕರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ, ಇತರರು ಈ ಅಪಾಯಕ್ಕೆ ಒಳಪಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಮೂಲದಲ್ಲಿಯೇ ಶೇ.100ರಷ್ಟು ತ್ಯಾಜ್ಯವನ್ನು ಬೇರ್ಪಡಿಸಿ ನೀಡಿ, ಪಾಲಿಕೆಯೊಂದಿಗೆ ಸಹಕರಿಸಿ" ಎಂದು ಮನವಿ ಮಾಡಿದ್ದಾರೆ.
"ಕೊರೊನಾ ಐಸೋಲೇಶನ್ ಮನೆಗಳಲ್ಲಿ ಉತ್ಪತಿ ಆಗುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಆರೋಗ್ಯ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾರ್ಗಸೂಚಿಗಳನ್ವಯ ಸಂಗ್ರಹಿಸಲು ಹಾಗೂ ನಿರ್ವಹಿಸಲು ಸೂಕ್ತ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪೇಪರ್ನಲ್ಲಿ ಸುತ್ತಿ ಅಥವಾ ಹಳದಿ ಬಣ್ಣದ ಬಯೋ ಬಾಗ್ನಲ್ಲಿ ಹಾಕಿ, ಬಯೋಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
"ಸ್ಥಳೀಯ ಮನಪಾ ಸದಸ್ಯರ ಸಹಕಾರದೊಂದಿಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಕೊರೊನಾ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ವಾರ್ಡ್ ಮಟ್ಟದ ಟಾಸ್ಕ್ಫೋರ್ಸ್ ಸಮಿತಿಯನ್ನು ರಚಿಸಿದ್ದು, ಪ್ರತಿಯೊಂದು ವಾರ್ಡ್ಗೆ ಪಾಲಿಕೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
"ಪ್ರಸ್ತುತ ಇರುವ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಕೆ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಅನುಗುಣವಾಗಿ ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ ಪ್ರಯೋಗಾಲಯ ತಂತ್ರಜ್ಞರನ್ನು ಪಾಲಿಕೆ ವತಿಯಿಂದ ನೇಮಿಸಿಕೊಂಡು ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹ ತಂಡವನ್ನು ರಚಿಸಿಲಾಗಿದೆ. ಮನಪಾ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಒದಗಿಸಲಾಗುತ್ತಿದ್ದು, ಪ್ರಸ್ತುತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ" ಎಂದಿದ್ದಾರೆ.
"ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಜನರು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ತಪ್ಪಿದ್ದಲ್ಲಿ 2,500 ರೂ. ನಿಂದ 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ದೂರುಗಳು ಇದ್ದಲ್ಲಿ ಸಹಾಯವಾಣಿ ನಂ 155313, 9449007722 ನಂಬರ್ಗೆ ಕರೆ ಮಾಡಿ" ಎಂದು ಮೇಯರ್ ತಿಳಿಸಿದ್ದಾರೆ.
ಈ ಸಂದರ್ಭ ಉಪ ಮೇಯರ್ ಸುಮಂಗಲಾ ರಾವ್ ಉಪಸ್ಥಿತರಿದ್ದರು.