ಮಂಗಳೂರು, ಮೇ 21(DaijiworldNews/MS): ನಗರದಲ್ಲಿ ಹಸಿಕಸ - ಒಣಕಸ ವಿಂಗಡಿಸಿ ನೀಡುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ ಹರಡುತ್ತಿರುವ ಸಂದರ್ಭದಲ್ಲಿ ಪೌರ ಕಾರ್ಮಿಕರ ಕೆಲಸ ಶ್ಲಾಘನೀಯ. ಕೋವಿಡ್ ಸೋಂಕು ತಗಲಿದ ನಂತರ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಂತೆ ಪೌರ ಕಾರ್ಮಿಕರು ನಗರದ ಸ್ವಚ್ಛತೆ ಕಾಪಾಡುವಲ್ಲಿ ಅಹರ್ನಿಶಿ ದುಡಿಯುತಿದ್ದಾರೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರನ್ನು ಗೌರವಿಸುವಂತಹ ಕೆಲಸ ಆಗಬೇಕಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಪ್ರಮುಖವಾಗಿ ನಗರದಲ್ಲಿ ಕಸ ವಿಂಗಡನೆಯ ಸಮಸ್ಯೆಯ ಕುರಿತು ಈಗಾಗಲೇ ನ್ಯಾಯಾಲಯ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಸ ವಿಂಗಡಣೆಯ ಕುರಿತು ಆದೇಶ ಹೊರಡಿಸಿದೆ. ಇದು ಆಡಳಿತ ವ್ಯವಸ್ಥೆಯಿಂದ ಮಾತ್ರ ಸಾಧ್ಯವಾಗುವ ಮಾತಲ್ಲ. ಪ್ರತಿಯೊಬ್ಬ ನಾಗರಿಕರೂ ಕೂಡ ಈ ಕಾರ್ಯದಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರತಿ ಮನೆಯಿಂದಲೂ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡುವುದರಿಂದ ನಗರದಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ಸಹಕರಿಸಿದಂತಾಗುತ್ತದೆ. ನ್ಯಾಯಾಲಯ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ನೀಡಿರುವುದರಿಂದ ಭಾರತೀಯ ಜನತಾ ಪಾರ್ಟಿಯ ಪಾಲಿಕೆ ಆಡಳಿತ ಈ ಕ್ರಮ ಕೈಗೆತ್ತಿಕೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಪಕ್ಷವಿದ್ದರೂ ಈ ಕ್ರಮ ಜರಗಿಸಲೇಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ಸಾರ್ವಜನಿಕರು ಕಸ ವಿಂಗಡಣೆಗೆ ಸಹಕರಿಸಬೇಕು. ತನ್ಮೂಲಕ ವ್ಯವಸ್ಥೆಯ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.