ಮುಕ್ಕ, ಮೇ 20 (DaijiworldNews/SM): ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೋನಾ ಸೋಂಕಿತರ ಮೇಲೆ ನಿಗಾ ವಹಿಸಲು ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಕುರಿತಂತೆ ಎನ್ ಐಟಿಕೆ ಯಲ್ಲಿ ಐಸೋಲೇಷನ್ ಕೇಂದ್ರ ಗುರುವಾರದಂದು ಆರಂಭಗೊಂಡಿದೆ.
ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವತಿಯಿಂದ ವೈದ್ಯರು, ನರ್ಸ್ ಗಳು ಹಾಗೂ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಎನ್ ಐಟಿಕೆಯಲ್ಲಿ ಹಾಸ್ಟೆಲ್ ನ ಮೂರು ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಇನ್ನೂರು ಬೆಡ್ ಗಳ ಸಾಮರ್ಥ್ಯವುಳ್ಳ ಕೇಂದ್ರವನ್ನು ಸಿದ್ಧಗೊಳಿಸಲಾಗಿದೆ. ಅವಶ್ಯಕತೆ ಬಿದ್ದಲ್ಲಿ ಮತ್ತೆ ಮುನ್ನೂರು ಬೆಡ್ ಗಳ ಐಸೋಲೇಷನ್ ಕೇಂದ್ರ ಇಲ್ಲಿ ನಿರ್ಮಾಣ ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ.
ಇನ್ನು ಐಸೋಲೇಷನ್ ಕೇಂದ್ರಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿ ವೈದ್ಯರು, ಎನ್ ಐಟಿಕೆ ಆಡಳಿತಾಧಿಕಾರಿಗಳೊಂದಿಗೆ ಚರ್ಚಿಸಿದರು. ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವತಿಯಿಂದ ಎಲ್ಲಾ ವೈದ್ಯಕೀಯ ನೆರವನ್ನು ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ, ಮನಪಾ ಸದಸ್ಯೆ ಶ್ವೇತ, ಸರಿತ ಶಶಿಧರ್, ಮುಕ್ಕ ಆಸ್ಪತ್ರೆಯ ಡಾ. ಉದಯ ಕುಮಾರ್, ಎಸ್ ಐಟಿಕೆ ರಿಜಿಸ್ಟ್ರಾರ್ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.