ಬಂಟ್ವಾಳ, ಮೇ 20 (DaijiworldNews/SM): ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ಕೊಡದ ರಾಜ್ಯ ಸರಕಾರವು ಇರುವ ಪಡಿತರ ಚೀಟಿಗಳನ್ನೇ ರದ್ದು ಮಾಡುತ್ತಿದೆ. ಹೀಗಾಗಿ ಪಡಿತರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.
ಅವರು ತುಂಬೆಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಹಿಂದೆ ನಾವು ಮಾಡಿದ ವ್ಯವಸ್ಥೆಯನ್ನು ಮುಂದುವರಿಸುವ ಆಸಕ್ತಿ ಪ್ರಸ್ತುತ ಸರಕಾರಕ್ಕೆ ಇಲ್ಲವಾಗಿದೆ. ಸರಕಾರಕ್ಕೆ ರೇಶನ್ ಕಾರ್ಡ್ ಕಟ್ ಮಾಡುವ ಆಸಕ್ತಿ ಕಾರ್ಡ್ ವಿತರಣೆಗೆ ಇಲ್ಲವಾಗಿದೆ. ಬಡ ಜನತೆ ರಿಕ್ಷಾ, ಬೈಕ್ ಖರೀದಿಸಿದರೆ, ಮಹಿಳೆಯರು ಮನೆ ಕಟ್ಟಲು ಸಾಲ ಪಡೆದರೆ ಅವರಿಗೆ ಪಡಿತರ ನೀಡುವುದನ್ನೇ ತಡೆಯಲಾಗಿದೆ.
ಈ ಎರಡು ತಿಂಗಳಲ್ಲಿ ಎಪಿಎಲ್-ಬಿಪಿಎಲ್ ಎಂದು ನೋಡದೆ ಯಾರು ನ್ಯಾಯ ಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾನೋ ಅವರಿಗೆ ಅಕ್ಕಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ತಮ್ಮಲ್ಲಿ ಕಷ್ಟ ಇದ್ದಾಗ ಮಾತ್ರ ಜನರು ನ್ಯಾಯಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾರೆ ಎಂಬ ಸತ್ಯವನ್ನು ಸರಕಾರ ಅರಿಯಬೇಕಿದೆ ಎಂದರು.
ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಕ್ಷೇತ್ರದ ಎಲ್ಲಾ ಕಡೆ ಟಾಸ್ಕ್ಪೋರ್ಸ್ ಸಭೆ ನಡೆಸಲಾಗಿದ್ದು, ಕ್ಷೇತ್ರಕ್ಕೆ ಸಂಬಂಧಿಸಿ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯಲ್ಲಿ ೫೦ ಬೆಡ್, ಯೆನಪೋಯ ಸಂಸ್ಥೆಯ ಅಪಾರ್ಟ್ಮೆಂಟ್ನಲ್ಲಿ ೭೦ ಬೆಡ್ ಹಾಗೂ ಯುನಿವರ್ಸಿಟಿಯ ಹಾಸ್ಟೆಲ್ನಲ್ಲಿ ೧೦೦ ಬೆಡ್ಗಳ ವಿಶ್ರಾಂತಿ ಕೇಂದ್ರಗಳನ್ನು ಮಾಡಲಾಗಿದೆ ಎಂದರು.