ಕಾರ್ಕಳ, ಮೇ.20 (DaijiworldNews/PY): ಅಜೆಕಾರು ಶಿರ್ಲಾಲು ಹಾಡಿಯಂಗಡಿಯಲ್ಲಿ ಕುಡಿತದ ಮತ್ತಿನಲ್ಲಿ ಚಿಕ್ಕಪ್ಪನನ್ನು ಬಡಿದು ಕೊಂದ ಆರೋಪಿಯೊಬ್ಬನನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಶಿರ್ಲಾಲು ಹಾಡಿಯಂಗಡಿಯ ನಿವಾಸಿ ಆನಂದ ಸೇರ್ವೆಗಾರ್ (62) ಕೊಲೆಗೀಡಾದವರು. ಪತ್ನಿಯ ಅಕ್ಕನ ಮಗ ಕೆರ್ವಾಸೆಯ ಹರೀಶ್ (28) ಕೊಲೆ ಆರೋಪಿ.
ಕಳೆದ ಮೂವತ್ತು ವರ್ಷಗಳಿಂದ ಹಾಡಿಯಂಗಡಿಯಲ್ಲಿ ನೆಲೆಸಿರುವ ಆನಂದ ಸೇರ್ವಗಾರ್ಗೆ ನಾಲ್ಕು ಎಕರೆ ಜಾಗ ಇತ್ತು. ಕೃಷಿಯನ್ನೇ ಅವಲಂಬಿಸಿ ಸಂಸಾರ ನಡೆಸುತ್ತಿದ್ದ ಅವರು ಮದ್ಯವ್ಯಸನಕ್ಕೆ ಒಳಗಾಗಿ ಸಾಲಗಾರನಾಗಿದ್ದರು. ಜನವರಿ ತಿಂಗಳಿನಲ್ಲಿ ತನ್ನ ಜಾಗವನ್ನು ಮಾರಾಟ ಮಾಡಿದ್ದರು. ಜಾಗದ ಮಾಲಕರ ಅನುಮತಿಯೊಂದಿಗೆ ಅದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ವಿವಾಹಿತರಾಗಿದ್ದ ಆನಂದ ಸೇರ್ವೇಗಾರ್ ಅವರ ಪತ್ನಿ ಹಾಗೂ ಮಕ್ಕಳು ಬೇರೆಡೆಯಲ್ಲಿ ವಾಸವಾಗಿದ್ದರು.
ಕಳೆದ ಕೆಲ ತಿಂಗಳುಗಳಿಂದ ಆನಂದ ಸೇರ್ವೇಗಾರ್ನ ಅಕ್ಕನ ಮಗ ಹರೀಶ್ ಅದೇ ಜಾಗದಲ್ಲಿ ದುಡಿಯುತ್ತಿದ್ದನಲ್ಲದೇ ಕುಡಿತದ ಚಟವೊಂದಿದ್ದನು. ಮೇ 19 ರಾತ್ರಿ ವೇಳೆಯಲ್ಲಿ ಯಾವುದೋ ಕ್ಷುಲ್ಲಕ ವಿಚಾರದಲ್ಲಿ ಆನಂದ ಸೇರ್ವೇಗಾರ್ ಹಾಗೂ ಹರೀಶ್ ನಡುವೆ ಉಂಟಾದ ಜಗಳವು ತಾರಕ್ಕೇರಿತು. ಮರದ ಸೋಂಟೆಯಿಂದ ತಲೆಗೆ ಬಡಿದ ಪರಿಣಾಮವಾಗಿ ಆನಂದ ಸೇರ್ವೇಗಾರ ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕಟ್ಟುಕತೆ ಹೇಳಿದ...
ಮೇ 19ರ ಸಂಜೆ 5.30ರ ವೇಳೆಗೆ ಜಾಗ ಖರೀದಿದಾರ ಹಾಗೂ ಪ್ರಕರಣದ ದೂರುದಾರರಾಗಿರುವ ಗಣೇಶ್ ರಾವ್ ಅವರ ಮನೆಗೆ ಹರೀಶ ತೆರಳಿ ದುಡಿದ ಸಂಬಳವನ್ನು ಪಡೆದು ಅಲ್ಲಿಂದ ಹೊರಟು ಹೋಗಿದ್ದನು. ಅದೇ ದಿನ ರಾತ್ರಿ 11.40ರ ವೇಳೆಗೆ ಮತ್ತೇ ಅದೇ ಮನೆಗೆ ಹಿಂತಿರುಗಿ ಮನೆ ಮಂದಿಯಲ್ಲಿ ಅಘಾತಕಾರಿ ವಿಚಾರವೊಂದನ್ನು ತಿಳಿಸಿದ್ದಾನೆ.
ಆನಂದ ಸೇರ್ವೆಗಾರ್ರವರು ಮನೆಯ ಹೊರಗಡೆ ಬಿದ್ದುಕೊಂಡಿದ್ದಾರೆ. ತಲೆಗೆ ಗಾಯವಾಗಿರುತ್ತದೆ. ಮಾತನಾಡುತ್ತಿಲ್ಲ ಎಂದು ಕಟ್ಟುಕತೆ ಹೇಳಿದನು. ಅದರಂತೆ ಜಾಗ ಖರೀದಿದಾರ ಗಣೇಶ್ ರಾವ್, ಸುರೇಶ್, ಪ್ರಭಾಕರ ಎಂಬವರನ್ನು ಘಟನಾ ಸ್ಥಳಕ್ಕೆ ಜೊತೆಗೆ ಕರೆದುಕೊಂಡು ಹೋಗಿದ್ದರು.
ಮನೆಯಂಗಳದಲ್ಲಿ ತೀವ್ರ ರಕ್ತಸಾವ್ರದೊಂದಿಗೆ ಪ್ರಾಣ ಬಿಟ್ಟಿದ್ದ ಆನಂದ ಸೇರ್ವೇಗಾರ ಅವರ ತಲೆ ಭಾಗದಲ್ಲಿ ತೀವ್ರ ರಕ್ತಗಾಯ ಉಂಟಾಗಿತ್ತು. ಎಡಕೈಯ ಮಣಿಗಂಟಿಗೆ ನೈಲಾನ್ ರೋಪನ್ನು ಸುತ್ತಿ ಕಟ್ಟಲಾಗಿತ್ತು.
ಪರಾರಿಯಾಗಿದ್ದ ಆರೋಪಿಯ ಬಂಧನ: ಕಾರ್ಕಳ ಪೊಲೀಸ್ ವೃತ್ತನಿರೀಕ್ಷಕ ಸಂಪತ್ ಕುಮಾರ್, ಅಜೆಕಾರು ಠಾಣಾಧಿಕಾರಿ ಶುಭಕರ್ ಘಟನಾ ಸ್ಥಳಕ್ಕೆ ಅಗಮಿಸುತ್ತಿದ್ದಂತೆ ಆರೋಪಿ ಹರೀಶ್ ಘಟನಾ ಸ್ಥಳದಿಂದ ಪರಾರಿಯಾಗಿದ್ದನು. ಗುರುವಾರ ಬೆಳಿಗ್ಗೆ ಆರೋಪಿ ಹರೀಶನನ್ನು ಬಂಧಿಸಿ ನ್ಯಾಯಾಧೀಶರ ಸಮ್ಮಖದಲ್ಲಿ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.