ಕುಂದಾಪುರ, ಮೇ.20 (DaijiworldNews/PY): ಕುಂದಾಪುರ ಸರ್ಕಾರಿ ಕೊರೊನಾ ಆಸ್ಪತ್ರೆ ಮೊದಲಿನಿಂದಲೂ ಉತ್ತಮ ಸೇವೆಗೆ ಹೆಸರು ಪಡೆದಿದೆ. ಕಳೆದ ವರ್ಷ ಕೂಡಾ ಕೊರೊನಾಗೆ ಉತ್ತಮ ಚಿಕಿತ್ಸೆ ಇಲ್ಲಿ ದೊರಕಿತ್ತು. ಈ ಕೊರೊನಾದ 2ನೇ ಅಲೆಯ ಹೊಡೆತಕ್ಕೆ ಪ್ರತಿಸ್ಪರ್ಧಿಯಂತೆ ಚಿಕಿತ್ಸೆ ನೀಡುತ್ತಿದೆ. ಸಮರ್ಥ ವೈದ್ಯರ ಟೀಂನಲ್ಲಿ ಯುವ ವೈದ್ಯರ ಪಡೆ ಇಲ್ಲಿ ಗಮನ ಸಳೆಯುತ್ತಿದೆ.
ಸೇವೆಯೇ ವೈದ್ಯಧರ್ಮ ಎನ್ನುವುದನ್ನು ಸಾರುತ್ತಿರುವ ನಾಲ್ವರು ಯುವ ವೈದ್ಯರು ಕುಂದಾಪುರ ಕೊರೊನಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಎಲ್ಲೆಡೆ ಗಮನ ಸೆಳೆದಿದ್ದಾರೆ. ಕೊರೊನಾ ಎಂದರೆ ಹೆದರಿ ದೂರ ಸರಿಯುವ ಸನ್ನಿವೇಶದಲ್ಲಿ ವೈದ್ಯಕೀಯ ಶಿಕ್ಷಣ ಕಲಿತು ದೊಡ್ಡ ದೊಡ್ಡ ಕನಸುಗಳೊಂದಿಗೆ ಐಶಾರಾಮಿ ಜೀವನಶೈಲಿಯನ್ನು ಆರಿಸಿಕೊಳ್ಳುವವರ ನಡುವೆ ಆರ್ಥಿಕವಾಗಿ ಶಕ್ತರಿರುವ ಈ ಯುವ ವೈದ್ಯರು ಸೋಂಕಿತರ ಸೇವೆಗೆ ಧುಮಿಕಿರುವುದು ಸಾರ್ವಜನಿಕವಾಗಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಮುಂಬಯಿ ಹೋಟೆಲ್ ಉದ್ಯಮಿಗಳಾದ ಗಿಳಿಯಾರು ಬಡಾಮನೆ ರತ್ನಾಕರ ಶೆಟ್ಟಿಯವರ ಮಕ್ಕಳಾದ ಡಾ.ಅಶಿತ್, ಡಾ.ರಜತ್ ಹಾಗೂ ದಿ.ಮರಾಠ ಸುರೇಶ ಶೆಟ್ಟಿಯವರ ಪುತ್ರಿ ಡಾ.ರಚನಾ ಗಮನ ಸೆಳೆಯುತ್ತಿದ್ದಾರೆ. ಇವರೊಂದಿಗೆ ಕುಂದಾಪುರ ಹವಾಲ್ದಾರ್ ಕುಟುಂಬದ ಡಾ.ನಿವೇದಿತಾ ಕೂಡಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಕೆಲವರು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಈ ನಾಲ್ವರು ಯುವ ವೈದ್ಯರು ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಸೇವೆಲ್ಲಿಸುತ್ತಿದ್ದಾರೆ. ಈ ನಾಲ್ವರು ಯುವ ವೈದ್ಯರುಗಳಿಗೆ ಸೇವಾಧರ್ಮವೆ ಇಲ್ಲಿಗೆ ಕರೆ ತಂದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯ ಮಾಡಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಎಲ್ಲರೂ ಮೆಚ್ಚತಕ್ಕ ವಿಚಾರ.
ತಮ್ಮ ಮಕ್ಕಳು ತಮ್ಮ ಊರಿನಲ್ಲಿ ಸರ್ಕಾರಿ ಆಸ್ಪತ್ರೆಯ ಮೂಲಕ ಸೇವೆ ನೀಡುತ್ತಿರುವುದಕ್ಕೆ ಇವರ ಪೋಷಕರು ಖುಷಿ ಪಡುತ್ತಿದ್ದಾರೆ. ಇತ್ತೀಚೆಗಷ್ಟೆ ನಿಧನರಾದ ಮುಂಬೈ ಉದ್ಯಮಿ ಮರಾಠ ಸುರೇಶ ಶೆಟ್ಟರ ಪುತ್ರಿ ಡಾ.ರಚನಾ ತಂದೆಯ ಸೇವಾ ಕಾರ್ಯಗಳಿಂದಲೇ ಪ್ರೇರಿಪಿತಳಾದ್ದೇನೆ ಎನ್ನುತ್ತಾರೆ. ಡಾ.ಅಶಿತ್ ಹಾಗೂ ರಜತ್ ಕೂಡಾ ತಂದೆಯ ಮಾರ್ಗದರ್ಶನ ಹುಟ್ಟೂರಿನಲ್ಲಿ ಸೇವೆ ನೀಡುವುದು ಅಭಿಮಾನದ ವಿಚಾರ ಎನ್ನುತ್ತಾರೆ. ಇವರು ಕಳೆದ ವರ್ಷ ಜೂನ್ನಿಂದ ಅಕ್ಟೋಬರ್ ತನಕ ಇಲ್ಲಿ ಸೇವೆ ಸಲ್ಲಿಸಿದ್ದರು. ಈ ವರ್ಷವೂ ಕೂಡಾ ಸೇವೆಗೆ ನಿಯುಕ್ತರಾಗಿದ್ದಾರೆ. ನಿವೇದಿತಾ ವೈದ್ಯಕೀಯ ಕಾಲೇಜಿನಿಂದ ಹೊರ ಬರುತ್ತಲೆ ಸೇವೆಗೆ ಇಳಿದಿದ್ದಾರೆ.
ಕುಂದಾಪುರ ಕೊರೊನಾ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ. ನಾಗೇಶ್, ಡಾ.ವಿಜಯ ಶಂಕರ್, ಡಾ.ಚಂದ್ರ ಮರಕಾಲರಂತಹ ಹಿರಿಯ ಮಾರ್ಗದರ್ಶನ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ ಅವರ ನಿರ್ದೇಶನದಲ್ಲಿ ಈ ಯುವ ವೈದ್ಯರ ಪಡೆ ದಿನದ 24 ಗಂಟೆ ಸೇವೆ ಸಲ್ಲಿಸುತ್ತಿದ್ದಾರೆ.
“ಇಲ್ಲಿ ಕೊರೊನಾ ಮತ್ತು ನಾನ್ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದ್ದು, 120 ಬೆಡ್ಗಳನ್ನು ಹೊಂದಿದೆ. ಕಳೆದ ವರ್ಷ 3000 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವರ್ಷವೂ ಕೂಡಾ ಡಾ.ನಾಗೇಶ, ಡಾ.ವಿಜಯ ಶಂಕರ್, ಡಾ.ಚಂದ್ರ ಮರಕಾಲ ಮೊದಲಾದ ಹಿರಿಯ ವೈದ್ಯರೊಂದಿಗೆ ಯುವ ವೈದ್ಯರ ತಂಡ ಕೂಡಾ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಡಾ.ರಜತ್ ಮತ್ತು ಡಾ.ಅಶಿತ್ ಕಳೆದ ವರ್ಷವೂ ಇಲ್ಲಿ ಕೆಲಸ ಮಾಡಿದ್ದರು. ಇವರೊಂದಿಗೆ ಡಾ.ರಚನಾ, ಡಾ.ನಿವೇದಿತಾ ಕೂಡಾ ಇದ್ದಾರೆ. ಇವರಿಗೆ ಬೇಕಾದ ಮಾರ್ಗದರ್ಶನ ನೀಡುತ್ತಿದ್ದೇವೆ. ಅವರ ಆರೋಗ್ಯದ ಬಗ್ಗೆಯೂ ಗಮನ ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕೊರೊನಾ ರೋಗಿಗಳ ಸೇವೆಗೆ ಕಳಿಸುವುದು ಸ್ವಲ್ಪ ಕಷ್ಟ. ಈ ಯುವ ವೈದ್ಯರ ಪೋಷಕರನ್ನು ಅಭಿನಂದಿಸಬೇಕಾಗುತ್ತದೆ”- ಡಾ|ರಾಬರ್ಟ್ ರೆಬೆಲ್ಲೋ, ಮುಖ್ಯ ವೈದ್ಯಾಧಿಕಾರಿ, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ.
“ಕುಂದಾಪುರ ಸರ್ಕಾರಿ ಕೊರೊನಾ ಆಸ್ಪತ್ರೆಯಲ್ಲಿ ಈಗ ಹೊಸತಾಗಿ ನಾಲ್ಕು ಜನ ಯುವ ವೈದ್ಯರು ಡಾ.ನಾಗೇಶ, ಡಾ.ರಾಬರ್ಟ್ ರೆಬೆಲ್ಲೊ ಅವರ ನಿರ್ದೇಶನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಯುವ ಪೀಳಿಗೆಗೆ ಇದು ಮಾದರಿಯಾಗಬೇಕು. ರಾಜ್ಯದಾದ್ಯಂತ ಇರುವ ಯುವ ವೈದ್ಯರುಗಳು ಕೊರೊನಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು. ಕಳೆದ ವರ್ಷ ಸುಮಾರು 3000ದಷ್ಟು ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವರ್ಷವೂ ಕೂಡಾ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ” - ಕೆ.ರಾಜು, ಉಪ ವಿಭಾಗಾಧಿಕಾರಿ, ಕುಂದಾಪುರ