ಮಂಗಳೂರು, ಮೇ.20 (DaijiworldNews/PY): "ರಾಜ್ಯ ಸರ್ಕಾರ ಕರಾವಳಿಗೆ ಮೀನುಗಾರಿಕೆ ಮಂತ್ರಿ ಕೊಟ್ಟರೆ ಸಾಲದು. ಮೀನುಗಾರರಿಗೆ ನ್ಯಾಯಯುತವಾದ ವಿಶೇಷ ಪ್ಯಾಕೇಜ್ ಘೋಷಿಸಲೇಬೇಕು.ಬಡಪಾಯಿ ಮೀನುಗಾರರು ಮಾಡಿದ ತಪ್ಪಾದರೂ ಏನು?" ಎಂದು ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮಾನ್ಯ ಮುಖ್ಯಮಂತ್ರಿಗಳೇ ಬಡಪಾಯಿ ಮೀನುಗಾರರು ಮಾಡಿದ ತಪ್ಪಾದರೂ ಏನು? ಸ್ವಾಭಿಮಾನಿ ಕಡಲ ತಡಿಯ ಮಕ್ಕಳ ಡೀಸೆಲ್ ಸಬ್ಸಿಡಿ ಕಸಿದ ನಿಮ್ಮ ಸರ್ಕಾರ ಮೀನುಗಾರರ ದೋಣಿ ಕಡಲಿಗೆ ಇಳಿಯದಂತೆ ಮಾಡಿತ್ತು. ಈಗ ನಿಮ್ಮದೇ ಸರ್ಕಾರದ ಅವೈಜ್ಞಾನಿಕ ಲಾಕ್ ಡೌನ್ ಮೀನುಗಾರರ ಬದುಕನ್ನು ದಿಕ್ಕಾಪಾಲಾಗಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮಳೆಗಾಲ ಆರಂಭವಾದರೆ ಮತ್ತೆ 4 ತಿಂಗಳು ಬದುಕು ದಡದ ಪಾಲಾಗುತ್ತದೆ ರಾಜ್ಯ ಸರ್ಕಾರ ಕರಾವಳಿಗೆ ಮೀನುಗಾರಿಕೆ ಮಂತ್ರಿ ಕೊಟ್ಟರೆ ಸಾಲದು. ಮೀನುಗಾರರಿಗೆ ನ್ಯಾಯಯುತವಾದ ವಿಶೇಷ ಪ್ಯಾಕೇಜ್ ಘೋಷಿಸಲೇಬೇಕು. ಇದು ನಮ್ಮ ಕರಾವಳಿ ಜನರ ಹಕ್ಕೊತ್ತಾಯ" ಎಂದು ಆಗ್ರಹಿಸಿದ್ದಾರೆ.