ಮಂಗಳೂರು, ಮೇ 20 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಶಾಸಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಸಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಂಡಮಾರುತದಿಂದ ಅಪಾರ ಹಾನಿ ಸಂಭವಿಸಿದ್ದು, ಪ್ರಲೋಕೋಪಯೋಗಿ ರಸ್ತೆ , ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ರಸ್ತೆಗಳು ಹಾಗೂ ಮೀನುಗಾರಿಕೆ ರಸ್ತೆಗಳು ಕೊಚ್ಚಿ ಹೋಗಿದ್ದು, ಜಿಲ್ಲೆಗೆ ಒಟ್ಟಾರೆ ರೂ.126 ಕೋಟಿ ನಷ್ಟವಾಗಿದ್ದು ಹೀಗಾಗಿ ಪ್ರಕೃತಿ ವಿಕೋಪ ನಿಧಿಯಿಂದ ರೂ. 100.00 ಕೋಟಿಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಇದಲ್ಲದೆ ಗ್ರಾ.ಪಂ ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಕೋವಿಡ್ ವಾರಿಯರ್ಸ್ ಎಂದು ಗುರುತಿಸುವಂತೆ ಮತ್ತು ಎಲ್ಲಾ ಸ್ಥಳೀಯಾಡಳಿತ ಜನಪ್ರತಿನಿಧಿಗಳಿಗೆ ಪ್ರಥಮ ಹಂತದ ವ್ಯಾಕ್ಸಿನ್ ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ, ವೈದ್ಯರು ಹಾಗೂ ಶುಶ್ರೂಷಕರ ನೇಮಕ ಹಾಗೂ ವೇತನ ನೀಡಲು ಅನುಮತಿ, 40 ಜನ ಹೆಚ್ಚುವರಿ ಆರೋಗ್ಯಮಿತ್ರ ಕಾರ್ಯನಿರ್ವಾಹಕರನ್ನು ನೇಮಕ, ಕೋವಿಡ್ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಲು ಕೆವಿಜಿ ಮೆಡಿಕಲ್ ಕಾಲೇಜಿಗೆ ಅನುಮತಿ, ದಕ್ಷಿಣ ಕನ್ನಡ ಜಿಲ್ಲೆಗೆ ಆಕ್ಸಿಜನ್ ಟ್ಯಾಂಕರ್, 50 ಮತ್ತು 1 ಲಕ್ಷ ಪ್ರಮಾಣದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಸರಬರಾಜು ಮುಂತಾದ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಗಿದೆ.