ಮಂಗಳೂರು, ಮೇ 20 (DaijiworldNews/MS): ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂದು ಚರ್ಚ್ಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದ್ದು ಮತಾಂತರಗೊಂಡವರು ಪ್ರಾಟೆಸ್ಟೆಂಟ್, ಸೆಂಥಕೋಸ್ಟ್ ಚರ್ಚ್’ಗೆ ಹೋದಾಗ ಈ ರೀತಿಯಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
"ಕೋವಿಡ್ 19 ರ ಈ ಪ್ರತಿಕೂಲ ಸಮಯದಲ್ಲಿ ಕ್ರೈಸ್ತ ಸಮುದಾಯವು ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಚರ್ಚುಗಳಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಿನ ಹಸ್ತ ನೀಡುತ್ತಾ ಬಂದಿದೆ. ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸಹಕರಿಸಲಾಗುತ್ತಿದೆ.
ವ್ಯಾಕ್ಸಿನ್ ಪಡೆಯಲು ಸಾರ್ವಜನಿಕರಿಗೆ ಮಾಹಿತಿ ನೀಡಿ, ಆರಂಭದಲ್ಲಿ ಚರ್ಚ್ ವಠಾರಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗಿದೆ. ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಇತರ ಕ್ರೈಸ್ತ ಮುಖಂಡರುಗಳು ತಾವೇ ಮುಂದೆ ನಿಂತು ವ್ಯಾಕ್ಸಿನ್ ಪಡೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಚರ್ಚುಗಳಲ್ಲಿ, ವ್ಯಾಕ್ಸಿನ್ ಹಾಕಿಸಬಾರದು ಎಂದು ಪ್ರಚಾರಪಡಿಸಲಾಗುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಸುಳ್ಳು ಆರೋಪದಿಂದ ನೋವಾಗಿದೆ. ಇದನ್ನು ಖಂಡಿಸುತ್ತೇವೆ " ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕ್ಯಾಸ್ತೆಲಿನೊ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಸದೆ, "ಜಿಲ್ಲೆಯ ಮೂಡಿಗೆರೆ, ಆಲ್ದೂರು ಸೇರಿದಂತೆ ಕೆಲ ಭಾಗದಲ್ಲಿ ಚರ್ಚ್ಗಳಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ವ್ಯಾಕ್ಸಿನ್ ತಗೋಬೇಡಿ ಎಂದು ಚರ್ಚ್ಗಳಲ್ಲಿ ಹೇಳುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾರು, ಏಕೆ ಈ ರೀತಿ ಹೇಳುತ್ತಿದ್ದಾರೆ ಎಂಬುದನ್ನ ಪತ್ತೆ ಮಾಡಬೇಕು" ಎಂದು ಹೇಳಿದ್ದರು.