ಉಡುಪಿ, ಮೇ.19 (DaijiworldNews/HR): "ಕೊರೊನಾ ನಿಯಂತ್ರಿಸುವ ದೃಷ್ಟಿಯಿಂದ ಗ್ರಾಮ ಗ್ರಾಮಗಳಲ್ಲಿ ಕೊರೊನಾ ರೋಗ ಲಕ್ಷಣ ಇರುವ ಪ್ರತಿಯೊಬ್ಬರನ್ನು ಪರೀಕ್ಷಿಸುವ ಅಭಿಯಾನ ನಡೆಸಿ. ಈ ಬಗ್ಗೆ ಸ್ಥಳೀಯ ಖಾಸಗಿ ವೈದ್ಯರನ್ನು ಭೇಟಿಯಾಗಿ ಚರ್ಚಿಸಿ ಜ್ವರ, ಶೀತ ಸಂಬಂಧ ಬರುವ ರೋಗಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಸಿ ಪರೀಕ್ಷಿಸುವಂತೆ ಜಾಗೃತಿ ಮೂಡಿಸಿ. ಈ ಮೂಲಕ ಸಂಘಟನಾತ್ಮಕವಾಗಿ ಕೊರೊನಾ ಹಿಮ್ಮೆಟ್ಟಿಸುವ ಕೆಲಸವಾಗಬೇಕು" ಎಂದು ಶಾಸಕ ರಘುಪತಿ ಭಟ್ ಅವರು ಟಾಸ್ಕ್ ಪೋರ್ಸ್ ಸಭೆಯಲ್ಲಿ ಹೇಳಿದ್ದಾರೆ.
ಕೊರೊನಾ ನಿಯಂತ್ರಿಸುವ ಸಂಬಂಧ ರಚಿಸಲಾಗಿರುವ ಟಾಸ್ಕ್ ಫೋರ್ಸ್ ತಂಡದ ಜವಾಬ್ದಾರಿ ಮತ್ತು ಕಾರ್ಯಭಾರದ ಕುರಿತು ಇಂದು ಬ್ರಹ್ಮಾವರ ಭಾಗದ ಉಪ್ಪೂರು ಹಾಗೂ ಹಾವಂಜೆ ಗ್ರಾಮ ಪಂಚಾಯತ್ಗಳಿಗೆ ಸಂಬಂಧಿಸಿದಂತೆ ಉಪ್ಪೂರು ಜ್ಞಾನೇಶ್ವರಿ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಟಾಸ್ಕ್ ಫೋರ್ಸ್ ತಂಡಕ್ಕೆ ಸೂಚಿಸಿದರು.
ಜ್ವರ, ಶೀತ ಸಂಬಂಧಿಸಿದಂತೆ ಸ್ಥಳೀಯ ಖಾಸಗಿ ವೈದ್ಯರ ಬಳಿ ಬರುವ ರೋಗಿಗಳ ಬಗ್ಗೆ ವಿವರವನ್ನು ಪಡೆದುಕೊಳ್ಳಲು ಖಾಸಗಿ ವೈದ್ಯರಿಗೆ ಸೂಚಿಸುವುದು. ಅವರನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸುವುದು. ಕೊರೊನಾ ಸೊಂಕು ದೃಢಪಟ್ಟು ರೋಗಲಕ್ಷಣ ಇರುವವರನ್ನು ಕೊರೊನಾ ಕೇರ್ ಸೆಂಟರ್ ಗೆ ದಾಖಲಿಸಬೇಕು. ಹಾಗೂ ಮನೆಯಲ್ಲಿ ಐಸೋಲೇಷನ್ ಆದವರ ಆಕ್ಸಿಜನ್ ಸ್ಯಾಚುಲೇಷನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದರೆ ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.
ಇನ್ನು "ಉಡುಪಿಯ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್ ಮತ್ತು ಆಕ್ಸಿಜನ್ ಬೆಡ್ ಗಳ ಕೊರತೆಯಿರುವುದಿಲ್ಲ. ಯಾವುದೇ ಅಪಪ್ರಚಾರಗಳಿಗೆ ಜನತೆ ಕಿವಿಗೊಡದಂತೆ ಜನರಿಗೆ ಅರಿವನ್ನು ಮೂಡಿಸಬೇಕು. ಕೊರೊನಾ ಸೋಂಕಿತರ ಚಿಕಿತ್ಸೆ ಆಯುಷ್ಮಾನ್ ಯೋಜನೆಯಡಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಲ್ಲದೆ ಐಸೋಲೇಷನ್ ಆಗಲು ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ ಸಂಪೂರ್ಣ ಉಚಿತವಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲು 24 ಗಂಟೆಯೂ ವೈದ್ಯಕೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು" ಎಂದು ತಿಳಿಸಿದರು.
"ಕೊರೊನಾ ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿ ಐಸೋಲೇಷನ್ ಆದವರ ಮನೆಗೆ ಪ್ರತಿನಿತ್ಯ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿ ಅವರ ಸ್ಯಾಚುರೇಶನ್ ಲೆವೆಲ್ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ವೈದ್ಯಕೀಯ ತಜ್ಞರ ಪ್ರಕಾರ ಸೋಂಕು ದೃಢಪಟ್ಟವರು ತಮ್ಮ ಫಲ್ಸ್ ಸಾಚ್ಯುಲೇಷನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದ ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೆ ಅವರ ಆರೋಗ್ಯ ತಕ್ಷಣದಲ್ಲಿ ಸುಧಾರಿಸುತ್ತದೆ. ನಿರ್ಲಕ್ಷ್ಯ ವಹಿಸಿದರೆ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸೊಂಕು ದೃಢಪಟ್ಟವರ ಸ್ಯಾಚುಲೇಶನ್ ಲೆವೆಲ್ ದಿನಾ ಪರೀಕ್ಷೆ ಮಾಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ. 10.00 ಲಕ್ಷ ವೆಚ್ಚದಲ್ಲಿ ಫಲ್ಸ್ ಆಕ್ಷೀ ಮೀಟರ್ ಖರೀದಿ ಮಾಡಲಾಗಿದೆ. ಇದನ್ನು ಕೋವಿಡ್ ಸೋಂಕು ದೃಢಪಟ್ಟು ಮನೆಯಲ್ಲಿ ಐಸೋಲೇಷನ್ ಆದವರ ಮನೆಗೆ ಮತ್ತೆ ವಾಪಸ್ ಪಡೆಯುವ ಷರತ್ತು ವಿಧಿಸಿ ನೀಡಿ" ಎಂದು ಸೂಚಿಸಿದರು
ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ ಜಿ. ಹಾದಿಮನಿ, ತಹಶೀಲ್ದಾರ್ ಕಿರಣ್ ಗೋರಯ್ಯ, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣರಾಜ್, ಹಾವಂಜೆ ಗ್ರಾಮ ಪಂಚಾಯತ್ ಅಜಿತ್, ಆರೋಗ್ಯ ಇಲಾಖೆ ಅಧಿಕಾರಿಗಳು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.