ಕಾರ್ಕಳ, ಮೇ.19 (DaijiworldNews/HR): ಕೊರೊನಾ ಸೋಂಕು ನಿಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ವಾಸ್ತವವನ್ನು ಮರೆಮಾಚಿ ಜನರನ್ನು ಬೀದಿಗೆ ಬೀಳುವಂತೆ ಮಾಡಿದ್ದು, ಜನರ ಸಾವಿಗೆ ಆ ಸರಕಾರಗಳೇ ನೇರ ಹೊಣೆಯಾಗಿವೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಆರೋಪಿಸಿದ್ದಾರೆ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮುಂಭಾಗದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ವೈಪಲ್ಯದ ವಿರುದ್ದ ನಡೆದ ಸಾಂಕೇತಿಕ ಪ್ರತಿಭಟನೆಯ ಬಳಿಕ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿ" ಎಂದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, "ಕಾರ್ಕಳ ಶಾಸಕರಿಗೆ ವಾಸ್ತವದ ಅರಿವಿಲ್ಲ. ಇಂತಹ ತುರ್ತು ಸಂದರ್ಭವನ್ನು ಎದುರಿಸಲು ಈಗಾಗಲೇ ಪ್ರತೀ ಜಿಲ್ಲಾ ಮಟ್ಟದಲ್ಲೂ ಪ್ರಾಕೃತಿಕ ವಿಕೋಪ ತುರ್ತುನಿಧಿ ಇದ್ದು ಇದನ್ನು ಬಳಸಿ ಕೊಳ್ಳುವಲ್ಲಿ ವಿಪಲರಾಗಿದೆ. ದಾನಿಗಳು ಹಾಗೂ ಸಂಸ್ಥೆಗಳು ಉದಾರ ದೇಣಿಗೆ ನೀಡುವವರ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ನೋಡಿ ಕೊಳ್ಳಬೇಕು" ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಮಾತನಾಡಿ, "ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರಕಾರದ ವೈಫಲ್ಯಕ್ಕೆ ನ್ಯಾಯಾಂಗ ಮಧ್ಯ ಪ್ರವೇಶಿಸಿರುವುದೇ ಸಾಕ್ಷಿಯಾಗಿದೆ. ರಾಜ್ಯ ಸರಕಾರದ ವೈಪಲ್ಯಕ್ಕೆ ಪ್ರಧಾನ ಮಂತ್ರಿಗಳು ಈ ಬಗ್ಗೆ ಪ್ರತೀ ಜಿಲ್ಲಾ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿರುವುದೇ ಸಾಕ್ಷಿಯಾಗಿದೆ. ಕರೋನಾ ಲಸಿಕೆಯೂ ಸೇರಿ ಸಂಬಂದ ಪಟ್ಟ ಔಷದಗಳಿಗೆ ಇಂತಹ ದುರಂತ ಸಂದರ್ಭದಲ್ಲಿಯೂ ಜಿಎಸ್ಟಿ ತೆರಿಗೆ ಹಾಕುವ ಈ ಸರಕಾರಕ್ಕೆ ಆಡಳಿತ ನಡೆಸುವ ಸಾಂವಿಧಾನಿಕ ಬದ್ದತೆ ಇಲ್ಲ" ಎಂದು ಕಟುಶಬ್ದಗಳಿಂದ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ನಗರಾದ್ಯಕ್ಷ ಮಧುರಾಜ್ ಶೆಟ್ಟಿ, ತಾಪಂ. ಸದಸ್ಯ ಸುಧಾಕರ ಶೆಟ್ಟಿ, ಕೃಷಿ ಘಟಕ ಅಧ್ಯಕ್ಷ ಉದಯ ಶೆಟ್ಟಿ, ಹಿಂದುಳಿದ ಘಟಕ ಅಧ್ಯಕ್ಷ ಕುಶ ಮೂಲ್ಯ, ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಎಸ್ಸಿ ಘಟಕ ಅಧ್ಯಕ್ಷ ಅಣ್ಣಪ್ಪ ನಕ್ರೆ, ಪ್ರಧಾನ ಕಾರ್ಯದರ್ಶಿ ಜೋಜ್೯ ಕ್ಯಾಸ್ತಲೀನೋ, ಪ್ರಭಾಕರ ಬಂಗೇರ, ಸುನೀಲ್ ಕೋಟ್ಯಾನ್, ಪಂಚಾಯತ್ ಸದಸ್ಯರಾದ ವಿಶ್ವನಾಥ ಭಂಡಾರಿ, ಅನಿತಾ ಡಿ'ಸೋಜ, ಶೋಭಾ ಇತರರು ಉಪಸ್ಥಿತರಿದ್ದರು.