ಕಾಸರಗೋಡು, ಮೇ.19 (DaijiworldNews/HR): ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 110ಕಿಲೋ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತನ ಆರೋಪಿಯನ್ನು ವಡಗರದ ಅಬೂಬಕ್ಕರ್ (34)ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ ಮಂಜೇಶ್ವರ ವಾಮಂಜೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.
ಅಬಕಾರಿ ಸಿಬಂದಿಗಳು ವಾಹನ ನಿಲ್ಲಿಸಲು ಸೂಚನೆ ನೀಡಿದರೂ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಬೆನ್ನಟ್ಟಿದ ಸಿಬಂದಿಗಳು ಉಪ್ಪಳ ಹಿದಾಯತ್ ನಗರದಲ್ಲಿ ತಡೆದು ತಪಾಸಣೆ ನಡೆಸಿದಾಗ ತಂಬಾಕು ಉತ್ಪನ್ನ ಪತ್ತೆಯಾಗಿದ್ದು, ಮಂಗಳೂರಿನಿಂದ ಕೇರಳದ ವಡಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.