ಮಂಗಳೂರು, ಮೇ.19 (DaijiworldNews/HR): ಕರ್ನಾಟಕ ರಾಜ್ಯದಲ್ಲಿ ಪ್ರತಿ ಇಬ್ಬರಿಗೆ ಒಬ್ಬರಂತೆ ಕೊರೊನಾ ಸೋಂಕು ತಗಲುತ್ತಿದ್ದು, ಸರಕಾರ ನಿಜವಾದ ಅಂಕಿ ಅಂಶಗಳನ್ನು ನೀಡದೇ ಮತ್ತು ಕೋವಿಡ್ ಪರೀಕ್ಷೆಯನ್ನು ಮಾಡದೇ, ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ತೀವ್ರ ಕಳವಳಕರಿಯಾಗಿದೆ. ಪ್ರತಿಯೊಬ್ಬರು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ವೈದ್ಯರುಗಳು ನೀವು ತಡವಾಗಿ ಆಸ್ಪತ್ರೆಗೆ ಸೇರಿದ್ದೇ ಸಾವಿಗೆ ಕಾರಣ ಎಂದು ಕಾರಣವನ್ನು ನೀಡುತ್ತಿದ್ದು, ಆರೋಗ್ಯ ಇಲಾಖೆ ಕೂಡಲೇ ಸೋಂಕಿತರ ಪರೀಕ್ಷೆಯನ್ನು ಮಾಡಿ, ಮನೆಮನೆಗೆ ಭೇಟಿ ಮಾಡಿದರೆ ಕೊರೊನಾವನ್ನು ಎದುರಿಸಲು ಸಾಧ್ಯ ಎಂದು ಹೆಲ್ಪ್ಲೈನ್ ಸಂಚಾಲಕ, ಎಐಸಿಸಿ ಕಾರ್ಯದರ್ಶಿ ಮತ್ತು ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜ ಹೇಳಿದ್ದಾರೆ.
ಈ ಕುರಿತು ಗೋಷ್ಠಿಯಲ್ಲಿ ಮಾತನಡಿದ ಅವರು, ಜಿಲ್ಲೆಯಲ್ಲಿ ಅನೇಕ ಸಾವುಗಳು ಸಂಭವಿಸುತ್ತಿದ್ದರೂ, ಅವರು ಕೊವಿಡ್ ರೋಗದಿಂದ ಸತ್ತರೂ, ಕೋವಿಡಿನಿಂದಲ್ಲ ಎಂಬ ಕಾರಣವನ್ನು ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ದಕ್ಷಿಣ ಕನ್ನಡದ ಎಲ್ಲ ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ? ಎಷ್ಟು ಮಂದಿ ಕೊರೊನಾ ಪಾಸಿಟಿವ್ ಬಂದ ನಂತ ಸಾವನ್ನಪ್ಪಿದ್ದಾರೆ? ಇತರ ಕಾರಣಗಳಿಂದ ಸಾವನ್ನಪ್ಪಿದ್ದವರ ಸಂಖ್ಯೆಯನ್ನು ಆರೋಗ್ಯ ಇಲಾಖೆ ಕೂಡಲೇ ಬಿಡುಗಡೆ ಮಾಡಬೇಕು" ಎಂದು ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
"ದ್ವಿತೀಯ ಹಂತದ ಕೊರೊನಾದಲ್ಲಿ ಆಸ್ಪತ್ರೆಗೆ ದಾಖಲಾದ 2-3 ಗಂಟೆಯೊಳಗೆ ಸಾವನ್ನಪ್ಪುತ್ತಿರುವುದು ತೀವ್ರ ಕಳಕಳಿಯಾಗಿರುವುದು, ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಉಸ್ತುವಾರಿ ಮಂತ್ರಿಗಳು ಜನರಿಗೆ ತಿಳುವಳಿಕೆ ಮೂಡಿಸುವುದು ಅವಶ್ಯಕತೆಯಿದೆ" ಎಂದರು.
ಇನ್ನು ಲಸಿಕೆಗಾಗಿ ಅನೇಕರು ದಾರಿ ನೋಡುತ್ತಿದ್ದರೂ, ಲಸಿಕೆ ಹಂಚಿಕೆ ಕೇವಲ ಉಳ್ಳವರಿಗೆ ಮಾತ್ರ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರಕಾರ ಲಸಿಕೆಯನ್ನು ತರಿಸಿ ನೀಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಕೂಡಲೇ ನಿಗದಿತ ಸಮಯದೊಳಗಡೆ ಲಸಿಕೆಯನ್ನು ಉತ್ಪಾದಿಸಿ, ರಾಜ್ಯ ಸರಕಾರವೇ ಮನೆ ಮನೆಗೆ ತೆರಳಿ, ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕೆಂಬುದು ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸುತ್ತದೆ" ಎಂದಿದ್ದಾರೆ.
"ರಾಜ್ಯದಲ್ಲಿ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ವಿದ್ಯುತ್ ಬಿಲ್ಲು ಮತ್ತು ನೀರು ಬಿಲ್ಲು, ವಾಹನಗಳ ಕಂತುಗಳು ಮತ್ತು ಅದರ ಬಡ್ದಿ ಮತ್ತು ಇತರ ಮನೆ ಸಾಲ, ವ್ಯಾಪಾರ ಸಾಲಗಳನ್ನು ಕೋವಿಡ್ ಸಂದರ್ಭದ 2 ತಿಂಗಳುಗಳಲ್ಲಿ ಸಂಪೂರ್ಣ ಮನ್ನ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜು ಮತ್ತು ನೀರನ್ನು ನಿಲ್ಲಿಸಕೂಡದು ಎಂದು ಈಗಾಗಲೇ ರಾಜ್ಯ ಸರಕಾರಕ್ಕೆ ಮೆಸ್ಕಾಂ ಮತ್ತು ನಗರಪಾಲಿಕೆಯ ಮೂಲಕ ಮನವಿಗಳನ್ನು ಸಲ್ಲಿಸಲಾಗಿದ್ದು, ಸರಕಾರ ಕೂಡಲೇ ಈ ಬಗ್ಗೆ ಘೋಷಣೆ ಮಾಡಬೇಕೆಂದು ಕಾಂಗ್ರೆಸ್ ಮುಖ್ಯ ಮಂತ್ರಿಯನ್ನು ಒತ್ತಾಯಿಸುತ್ತದೆ" ಎಂದರು.
ಇನ್ನು "ಇಂದಿರಾ ಕ್ಯಾಂಟಿನಿನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿದ್ದರೂ, ಅದರ ಸಾಮರ್ಥ್ಯವು ಕಡಿಮೆಯಾಗಿದ್ದು, ಕೇವಲ 200-250 ಜನರಿಗೆ ಮಾತ್ರ ಊಟ ತಿಂಡಿಗಳನ್ನು ನೀಡುತ್ತಿದ್ದು, ಇದರ ಸಾಮರ್ಥ್ಯವನ್ನು ಹೆಚ್ಚಿಸಿ, ಕನಿಷ್ಠ ಪಕ್ಷ 18 ಗಂಟೆಗಳ ಸಮಯವಾದರೂ ಊಟ ತಿಂಡಿಯನ್ನು ನೀಡುವಂತೆ ರಾಜ್ಯ ಸರಕಾರವನ್ನು ನಿರ್ದೇಶಿಸಬೇಕೆಂದು, ರಾಜ್ಯದ ಮುಖ್ಯ ಮಂತ್ರಿಗಳನ್ನು ಕಾಂಗ್ರೆಸ್ ಒತ್ತಾಯಿಸುತ್ತದೆ" ಎಂದು ಹೇಳಿದ್ದಾರೆ.