ಬೆಳ್ತಂಗಡಿ, ಮೇ 19 (DaijiworldNews/MS): ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ತಾಲೂಕಿನ ಎಂಟು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಚಾರಿ ಗಂಟಲು ದ್ರವ ಸಂಗ್ರಹ ವಾಹನಗಳ ಸಂಚಾರ ಪ್ರಾರಂಭಿಸಲಾಗಿದೆ.
8 ಪಂಚಾಯತ್ ಕ್ಷೇತ್ರಗಳಿಗೆ ಅನುಕೂಲವಾಗುವಂತೆ 8 ವಾಹನಗಳನ್ನು ಒದಗಿಸುವ ಮೂಲಕ ಸೋಂಕಿತರ ಪತ್ತೆ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಲಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ರೋಗ ಲಕ್ಷಣ ಕಂಡುಬಂದವರು, ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಪರೀಕ್ಷೆ ನಡೆಸಲಾಗುತ್ತದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
'ಪ್ರತಿ ವಾಹನದಲ್ಲಿ ಚಾಲಕ, ಡಾಟಾ ನೋಂದಣಿ ಸಿಬ್ಬಂದಿ, ತಂತ್ರಜ್ಞರು ಇರಲಿದ್ದಾರೆ. ಮಧ್ಯಾಹ್ನದ ಒಳಗೆ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇದರಿಂದ ವರದಿಯೂ ಶೀಘ್ರ ದೊರೆಯುತ್ತದೆ. ತಾಲ್ಲೂಕು ಆರೋಗ್ಯ ಇಲಾಖೆ ಕೋರಿಕೆ ಮೇರೆಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ತಹಶೀಲ್ದಾರ್ ಮಹೇಶ್ .ಜೆ ಮುಂತಾದವರು ಇದ್ದರು