Karavali
ಕಾರ್ಕಳ: ಅಕಾಲಿಕ ಮಳೆಯಿಂದ ಮೆಸ್ಕಾಂಗೆ ರೂ. 8 ಲಕ್ಷ ನಷ್ಟ , ಗ್ರಾಹಕರಿಗೆ ಕಷ್ಟ
- Wed, May 19 2021 08:45:36 AM
-
ಕಾರ್ಕಳ, ಮೇ 19 (DaijiworldNews/MS): ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ಸುರಿದ ಅಕಾಲಿಕ ಮಳೆಯಿಂದಾಗಿ 40 ವಿದ್ಯುತ್ ಕಂಬಗಳು ಧರೆಶಾಹಿಯಾಗಿದ್ದು, ಸುಮಾರು ರೂ.8 ಲಕ್ಷ ನಷ್ಟ ಸಂಭವಿಸಿದೆ. ಗಾಳಿ, ಮಳೆ, ಸಿಡಿಲಿನ ಆರ್ಭಟಕ್ಕೆ ಇನ್ಸೊಲೇಟರ್ ಸ್ಪೋಟ ಸಂಭವಿಸುತ್ತಿದ್ದು, ಉರಗ, ಓತಿ, ಕಪ್ಪೆ, ಹಲ್ಲಿ,ಆಬಾವಲಿ ಓಡಾಟದಿಂದ ಇನ್ಸೊಲೇಟರ್ಗೆ ಸ್ವರ್ಶಗೊಳ್ಳುತ್ತಿರುವುದರಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಗ್ರಾಹಕರು ಸಾಕಷ್ಟು ಅನಾನುಕೂಲಕ್ಕೆ ಒಳಗಾಗುವಂತಾಗಿದೆ. ದಿನದ ಯಾವುದೇ ಹೊತ್ತಿನಲ್ಲಿ ಬೀಸುವ ಗಾಳಿ, ಮಳೆ ಅಥವಾ ಸಿಡಿಲಿಗೆ ವಿದ್ಯುತ್ ಲೈನ್ನಲ್ಲಿ ಉಂಟಾದ ವ್ಯತ್ಯಯವನ್ನು ಸರಿಪಡಿಸಲು ಲೈನ್ ಮ್ಯಾನ್ಗಳು ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿತ್ತಿದ್ದಾರೆ.
ಕಾರ್ಕಳದಲ್ಲಿರುವ ಕೇಮಾರು ಸಬ್ಸ್ಟೇಶನ್
ಸಿಡಿಲು, ಮಿಂಚಿಗೆ ಸ್ಪೋಟಗೊಂಡಿರುವ ಇನ್ಸೊಲೇಟರ್
ಕಪ್ಪೆಯ ಓಡಾಟ ವಿದ್ಯುತ್ ಸರಬರಾಜುಗೆ ತಂದೊಡ್ಡಿತು ಸಂಚಕಾರ
ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾದಾಗಲ್ಲೆಲ್ಲ ಲೈನ್ಮನ್ಗಳು ಯಾವ ಲೈನ್ನಲ್ಲಿ ಯಾವ ಸ್ಥಳದಲ್ಲಿ ಕೊಂಬೆಯ ಕಡ್ಡಿ ಅಥವಾ ಮರದ ರೆಂಬೆಗಳು ಬಿದ್ದಿವೆಯೆಂದು, ಜಂತು ಹುಳುಗಳ ಕಾಟವನ್ನು ಹುಡುಕುತ್ತಾ ಸಾಗಿ ಅದನ್ನು ತೆಗೆದುಹಾಕುವುದರೊಳಗಾಗಿ ಮತ್ತೊಂದೆಡೆ ಇಂತಹುದು ಘಟನೆ ನಡೆದಿರುತ್ತದೆ. ಹೀಗಾಗಿ ಮೆಸ್ಕಾಂ ಲೈನ್ಮನ್ಗಳಿಗೆ ರಾತ್ರಿ ಹಗಲೆನ್ನದೆ ನಿರಂತರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಎದುರಾಗಿದೆ.ಈ ನಡುವೆ ಆಗಿದ್ದಾಂಗ್ಗೆ ಬಂದು ಹೋಗುತ್ತಿರುವ ಮಳೆಯಿಂದಾಗಿ ಪರಿಸರದಲ್ಲಿ ಕಪ್ಪೆಗಳ ಹಾವಳಿ ಹೆಚ್ಚುತ್ತಿದ್ದು, ಇವು ಟ್ರಾನ್ಸ್ಪರ್ಮರ್ಗೆ ಹತ್ತುವುದರಿಂದ ಶಾರ್ಟ್ ಸರ್ಕ್ಯೂಟ್ಗೆ ಕಾರಣವಾಗಿಯೂ ಕರೆಂಟ್ ಹೋಗುತ್ತಿದೆ. ಲೈನ್ಮನ್ಗಳನ್ನು ಅದನ್ನು ತೆರವುಗೊಳಿಸುವವರೆಗೂ ಗ್ರಾಹಕರಿಗೆ ವಿದ್ಯುತ್ ಬಳಕೆಗೆ ಸಿಗುತ್ತಿಲ್ಲ. ಇದರ ಜೊತೆಗೆ ಎಂದಿನಂತೆ ಬಾವಲಿಗಳ ಕಾಟ ಇದ್ದೇ ಇದೆ.
ಇದರ ಜೊತೆಗೆ ವಿದ್ಯುತ್ ಲೈನ್ಗಳ ಮೇಲ್ಬಾಗದಲ್ಲಿರುವ ತೆಂಗಿನ ಮರದ ಗರಿಗಳು, ಮರಗಳ ರೆಂಬೆಗಳು ಗಾಳಿಯ ರಭಸಕ್ಕೆ ಬಾಗಿದಾಗಲೂ ಈ ರೀತಿಯ ಶಾರ್ಟ್ಸರ್ಕ್ಯೂಟ್ ಸಂಭವಿಸುತ್ತದೆ. ಇದೆಲ್ಲವನ್ನು ಹುಡುಕುವ, ತೆರವುಗೊಳಿಸುವ ಜವಾಬ್ದಾರಿ ಲೈನ್ಮನ್ಗಳ ಮೇಲಿದೆ. ಈ ನಡುವೆ ಲಾಕ್ಡೌನ್ ಕೂಡಾ ಇರುವುದರಿಂದ ವಿದ್ಯುತ್ ಬಳಕೆಯ ಅವಶ್ಯಕತೆಯು ಹೆಚ್ಚುತ್ತಿದೆ. ಆದರೆ ವಾತಾವರಣದಲ್ಲಿನ ಬದಲಾವಣೆ ಹಾಗೂ ಎಕ್ಸಪ್ರೆಸ್ ವಿದ್ಯುತ್ ಲೈನ್ಗಳು ಇಲ್ಲದೇ ಇರುವುದರಿಂದ ಗ್ರಾಹಕರಿಗೆ ಸಮಸ್ಯೆ ಉಂಟಾಗುತ್ತಿದೆ.ಈದು ಗ್ರಾಮದಲ್ಲಿ ಬೇಕಿದೆ ವಿದ್ಯುತ್ ಸಬ್ಸ್ಟೇಷನ್ - ವಲಯ ಕಚೇರಿ
ಬಜಗೋಳಿ ಹೋಬಳಿ ವ್ಯಾಯಲ್ಲಿರುವ ನಲ್ಲೂರು, ಈದು, ನೂರಾಳ್ಬೆಟ್ಟು ಗ್ರಾಮಗಳಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳಿವೆ. ಇದರಲ್ಲಿ ಪಂಪ್ಸೆಟ್, ಕೈಗಾರಿಕೆ, ಮನೆ ಬಳಕೆ ಸೇರಿವೆ. ಈ ಭಾಗದಲ್ಲಿ ಪ್ರತಿ ವರ್ಷ ವಾಡಿಕೆಯಲ್ಲಿ 7 ತಿಂಗಳು ಗಾಳಿ, ಮಳೆ, ಸಿಡಿಲು ಇರುತ್ತವೆ. ಹೀಗಾಗಿ ನಿರಂತರ ವಿದ್ಯುತ್ ಸಂಪರ್ಕ ಕಡಿತವುಂಟಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯೇ ಒಂದು ಸಣ್ಣ ಕಡ್ಡಿ ವಿದ್ಯುತ್ ಲೈನ್ನ ಮೇಲೆ ಬಿದ್ದರೂ ಅಷ್ಟೂ ವ್ಯಾಪ್ತಿಯಲ್ಲಿ ಲೈನ್ಮನ್ಗಳು ಹುಡುಕುತ್ತಾ ಸಾಗಬೇಕು. ಒಂದು ಕಡೆಯಲ್ಲಿ ಸರಿಪಡಿಸಲು ಮುಂದಾಗುವಾಗ 5 ಸಾವಿರ ಸಂಪರ್ಕಗಳಿಗೂ ವಿದ್ಯುತ್ ಸರಬರಾಜು ಇರುವುದಿಲ್ಲ.
ಈ ಎಲ್ಲಾ ಸಮಸ್ಯೆ ನಿವಾರಿಸಲು ಈದು ಗ್ರಾಮದಲ್ಲಿ ಒಂದು ಸಬ್ಸ್ಟೇಷನ್ ಅನಿವಾರ್ಯ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡು ಬಂದಿದ್ದಾರೆ. ಈ ಹಿಂದೆ ಈದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ರತ್ನಾಕರ ಆಚಾರ್ಯ ಅವರು ಈ ಬಗ್ಗೆ ಈದು ಗ್ರಾಮದ ಗುಂಪಕಲ್ಲು ಬಳಿಯಿರುವ ಗೇರುಬೀಜ ತೋಪನ್ನೇ ಬಳಸಿಕೊಳ್ಳುವಂತೆ ಕಡತ ಸಿದ್ಧಪಡಿಸಿ ಮೆಸ್ಕಾಂಗೆ ನೀಡಿದ್ದರು. ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೀಸಲು ಅರಣ್ಯದ ನೆಪವೊಡ್ಡಿ ಯೋಜನೆಗೆ ತಡೆಯಾಗಿದ್ದರು. ಆ ನಂತರ ಯೋಜನೆಯು ನೆನೆಗುದಿಗೆ ಬಿದ್ದಿತ್ತು. ಇದೀಗ ದಿನದ 24 ಗಂಟೆಯಲ್ಲಿ ಸುಮಾರು 50 ರಿಂದ 60 ಬಾರಿ ವಿದ್ಯುತ್ ಸಂಪರ್ಕ ಕಡಿತವುಂಟಾಗುತ್ತಿರುವುದರಿಂದ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದಾರೆ. ಸಬ್ಸ್ಟೇಶನ್ ಅನಿವಾರ್ಯತೆ ಮತ್ತೆ ಚರ್ಚೆಗೆ ಬಂದಿದೆ.ಮೆಸ್ಕಾಂ ನಿಯಮ ಪರಿಪಾಲನೆಯಾಗಲಿ
ಮೆಸ್ಕಾಂ ನಿಯಮದಂತೆ ಪ್ರತಿ 20ಕಿಲೋಮೀಟರ್ಗೆ ಒಂದು ಸಬ್ಸ್ಟೇಶನ್ ಅಗತ್ಯವಾಗಿ ಬೇಕಿದೆ. ಆದರೆ ಇದೀಗ ಕಾರ್ಕಳ ಸಬ್ಸ್ಟೇಶನ್ನಿಂದ ಈದು, ಕೂಡ್ಯೆ, ಗುಮ್ಮೆತ್ತು, ಕುರಿಯಾರ್ವರೆಗೆ ಸುಮಾರು ೪೦ ಕಿಲೋಮೀಟರ್ ದೂರದವರೆಗೂ ಕಾರ್ಕಳ ಸಬ್ಸ್ಟೇಶನ್ನಿಂದ ವಿದ್ಯುತ್ ಸರಬರಾಜಾಗುತ್ತಿದೆ. ಇದರಿಂದಾಗಿ ಕಾರ್ಕಳದಿಂದ ಹೊರಡುವ 11 ಸಾವಿರ ಕೆವಿ ವಿದ್ಯುತ್ ಈದುವಿಗೆ ಬರುವಾಗ 2.5 ಸಾವಿರ ಕೆವಿನಷ್ಟು ಕಡಿಮೆಯಾಗುತ್ತದೆ. ಇದರಿಂದ ನಲ್ಲೂರು, ಈದು ನೂರಾಳ್ಬೆಟ್ಟು ಗ್ರಾಮಗಳಿಗೆ 220 ವೋಲ್ಟೇಜ್ ಸಿಗುವ ಬದಲಿಗೆ 170 ರ ಆಸುಪಾಸಿನಲ್ಲಿ ಲಭ್ಯವಿರುತ್ತದೆ. ಇದರಿಂದ ಈ ಭಾಗದ ಸಾವಿರಾರು ಕೃಷಿಕರ ಪಂಪ್ ಸೆಟ್ಗಳು ನಿರಂತರವಾಗಿ ಹಾಳಾಗುತ್ತಿರುತ್ತದೆ. ನೀರಾವರಿಗೂ ಸಮಸ್ಯೆ ಉಂಟಾಗುತ್ತಿದೆ. ಮನೆಬಳಕೆಯಲ್ಲಿ ಫ್ಯಾನ್, ಮಿಕ್ಸಿ, ರೆಫ್ರಿಜರೇಟರ್ಗಳಿಗೆ ಭಾರೀ ಪ್ರಮಾಣದ ಹಾನಿಯೂ ಸಂಭವಿಸುತ್ತಿದೆ. ಮಾತ್ರವಲ್ಲದೆ ಸರಿಯಾದ ವೋಲ್ಟೇಜ್ ಇಲ್ಲದೆ ಈ ಭಾಗದ ಸ್ವಉದ್ಯೋಗಿಗಳಿಗೆ ನಿರಂತರ ಉತ್ಪಾದನೆಯನ್ನೂ ನಡೆಸುವುದು ಅಸಾಧ್ಯವಾಗುತ್ತಿದೆ.ಉಡುಪಿ ಜಿಲ್ಲೆಗೆ ವಿದ್ಯುತ್ ನೀಡುವ ಅದಾನಿ ಪವರ್ ಕಾರ್ಪೋರೇಶನ್ನ ಹೈವೋಲ್ಟೇಜ್ ವಿದ್ಯುತ್ ಲೈನ್ ಕೂಡಾ ಈದು ಗ್ರಾಮವಾಗಿಯೇ ಹಾದುಹೋಗಿರುವುದಿಂದ ಸಬ್ಸ್ಟೇಶನ್ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ತಗಲುವುದಿಲ್ಲ. 4 ಎಕರೆ ಜಾಗವಷ್ಟೇ ಮೆಸ್ಕಾಂ ಬೇಕಿರುವ ಮೂಲಭೂತ ಸೌಕರ್ಯ. ಖಾಸಗಿ ಜಾಗವಿದ್ದರೆ ಅದಕ್ಕೆ ನಿಗದಿತ ಸರಕಾರಿ ಮೌಲ್ಯದ ಬೆಲೆಯಲ್ಲಿ ಮೆಸ್ಕಾಂ ಖರೀದಿಸಲೂ ಸಿದ್ಧವಿದೆ. ಈ ಬಗ್ಗೆ ಸ್ಥಳೀಯ ಜನಪತಿನಿಧಿಗಳು ಆಸಕ್ತಿ ವಹಿಸಿದರೆ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಬಹುದು. ಸಬ್ಸ್ಟೇಶನ್ನ ಜೊತೆಗೆ ಮೆಸ್ಕಾಂ ಸಿಬ್ಬಂದಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಲಯ ಕಚೇರಿಯನ್ನೂ ಇಲ್ಲಿಯೇ ನಿರ್ಮಾಣವಾಗಬೇಕೆಂಬುವುದು ಬಹುಕಾಲದ ಬೇಡಿಕೆಯಾಗಿದೆ.
ಬಜಗೋಳಿಯಲ್ಲಿ ಸಬ್ಸ್ವೇಶನ್ ನಿರ್ಮಾಣ ಜಾಗ ಕಾದಿರಿಸಲಾಗಿದೆ - ದಿಲೀಪ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಪ್ರಭಾರ) ಕಾರ್ಕಳ ವಿಭಾಗ
ಬಜಗೋಳಿಯಲ್ಲಿ ಕೆಎಸ್ಆರ್ಟಿಸಿ ಡಿಪೋಗಾಗಿ ಕಾದಿರಿಸಿದ ಜಾಗದ ಪಕ್ಕದಲ್ಲಿ ಮೆಸ್ಕಾಂ ಇಲಾಖೆಗಾಗಿ 2 ಎಕರೆ ಜಾಗ ಕಾದಿರಿಸಲಾಗಿದೆ. ಜಾಗ ಮಂಜೂರಾತಿಗಾಗಿ ಕಡತಗಳು ಜಿಲ್ಲಾಧಿಕಾರಿಯವರ ಮುಂದಿದೆ. ಜಾಗ ಮಂಜೂರು ಮಾಡಿದ್ದೇ ಆದಲ್ಲಿ 32 ಕೆವಿ ಸಬ್ ಸ್ವೇಶನ್ ನಿರ್ಮಾಣಗೊಳ್ಳಲಿದೆ. ಆ ಮೂಲಕ ಬಹುವರ್ಷ ಕಾಡುತ್ತಿರುವ ಸಮಸ್ಸೆಗೆ ಪರಿಹಾರ ಕಾಡಲಿದೆ.