ಮಂಗಳೂರು,ಮೇ.18 (DaijiworldNews/HR): ಮೊಹಮ್ಮದ್ ಹಾರೀಸ್ ನಲಪಾಡ್ ನೇತೃತ್ವದ ಉಚಿತ 'ಕಾಂಗ್ರೆಸ್ ಕೇರ್ಸ್ ಆಂಬ್ಯುಲೆನ್ಸ್' ಸೇವೆಗೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ನಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೊಹಮ್ಮದ್ ಹಾರೀಸ್ ನಲಪಾಡ್, "ಕೊರೊನಾ ಸೋಂಕು ನಿಭಾಯಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಡವಿದ್ದು, ಇದರಿಂದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಬಿಜೆಪಿ ಪಕ್ಷ ಹಣ, ಕಮಿಷನ್ ಮಾಡಲು ಮಾತ್ರ ಸೀಮಿತವಾಗಿದೆ. ಜನರ ಸಾವಿಗೆ ಉತ್ತರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜನರ ಸೇವೆಗೆ ಮುಂದಾಗಿದೆ. ಜಿಲ್ಲೆಯ ಜನತೆ ಜಾತಿ-ಬೇಧವಿಲ್ಲದೆ ಆಂಬ್ಯುಲೆನ್ಸ್ ಸೇವೆಯನ್ನು ಸದುಪಯೋಗ ಮಾಡಬೇಕು. ದಿನದ 24 ಗಂಟೆಯೂ ಈ ಸೇವೆ ಉಚಿತವಾಗಿ ಇರಲಿದೆ" ಎಂದು ಹೇಳಿದರು.
ಈ ವೇಳೆ ಸುಮಾರು 50 ಮಂದಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಐವನ್ ಡಿಸೋಜಾ, ಜೆ.ಆರ್.ಲೋಬೊ, ಮೊಯ್ದೀನ್ ಬಾವಾ, ಶಾಹುಲ್ ಹಮೀದ್, ಸವಾದ್ ಸುಳ್ಯ, ಯು.ಪಿ.ಇಬ್ರಾಹೀಂ, ಸುರೇಂದ್ರ ಕಂಬಳಿ, ಸುಹೈಲ್ ಕಂದಕ್, ಶಾಂತಲಾ ಗಟ್ಟಿ, ಆಶಿತ್ ಪಿರೇರಾ, ಸಿ.ಎಂ.ಮುಸ್ತಫಾ, ಶಬ್ಬೀರ್.ಎಸ್, ನಝೀರ್ ಬಜಾಲ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.