ಬಂಟ್ವಾಳ, ಮೇ 18 (DaijiworldNews/MS): ಲಾಕ್ ಡೌನ್ ನಲ್ಲಿ ವಾಹನ ಸಂಚಾರವಿಲ್ಲದೆ ಜನಸಾಮಾನ್ಯರಿಗೆ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಗಾಟವೇ ದೊಡ್ಡ ಚಿಂತೆಯಾಗಿದೆ. ಆದರೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಸಮಸ್ಯೆ ದೂರ ಮಾಡಿ ನಿಜಕ್ಕೂ ಮಾದರಿಯಾಗಿದೆ.
ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಯಿಂದ ರೇಷನ್ ಸಾಗಿಸಲು ಕಷ್ಟ ಪಡುವುದನ್ನು ಕಂಡ ಸ್ಥಳೀಯ ಮಾಣಿ ಗ್ರಾಮ ಪಂಚಾಯತ್ ಗ್ರಾಮಸ್ಥರಿಗೆ ಉಚಿತ ರಿಕ್ಷಾ ವ್ಯವಸ್ಥೆ ಮಾಡುವ ಮೂಲಕ ಮಾದರಿ ಜನಸ್ನೇಹಿ ಸೇವೆಯನ್ನು ಆರಂಭಿಸಿದ್ದು ಈ ಸೇವೆ ಸಾರ್ವಜನಿಕ ವಲಯದಲ್ಲಿ ಬಹಳ ಪ್ರಶಂಸೆಗೆ ಪಾತ್ರವಾಗಿದೆ.
ಮಾಣಿ ಗ್ರಾಮದ ವ್ಯಾಪ್ತಿಯಲ್ಲಿ ಬಹಳ ದೂರದಿಂದ ಜನರು ಬಂದು ಪಡಿತರ ಪಡೆದುಕೊಂಡು ಹೋಗುತ್ತಾರೆ. ಲಾಕ್ ಡೌನ್ ಸಮಯದಲ್ಲಿ ವಾಹನ ಸೌಕರ್ಯ ಇಲ್ಲದೆ, ತಲೆ ಹೊರೆಯಲ್ಲೂ ಕೂಡ ರೇಷನ್ ಕೊಂಡೊಯ್ಯಲಾಗದೆ ಗ್ರಾಮಸ್ಥರು ಅನಾನುಕೂಲದಿಂದ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಪಂಚಾಯತ್ ರೇಷನ್ ಪಡೆದು ಮನೆಗೆ ಸಾಗಿಸುವ ಗ್ರಾಮಸ್ಥರಿಗೆ ಪಂಚಾಯತ್ ವತಿಯಿಂದ ಎರಡು ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ.
ರೇಷನ್ ಸಾಗಾಟಕ್ಕಾಗಿಯೇ ಎರಡು ರಿಕ್ಷಾಗಳ ವ್ಯವಸ್ಥೆ ಮಾಡಿದ್ದು ಇದರೊಂದಿಗೆ ಈ ಸೇವೆಯನ್ನು ವ್ಯವಸ್ಥಿತವಾಗಿ ಪಂಚಾಯತ್ ಲೆಕ್ಕದಲ್ಲಿ ಜನಸ್ನೇಹಿ ಸೇವೆಯನ್ನು ಮುಂದುವರಿಸುವ ಸಾದ್ಯತೆ ಇದೆ ಎನ್ನಲಾಗಿದೆ. ಈ ಪಂಚಾಯತ್ ನ ಜನಸ್ನೇಹಿ ಸೇವೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ