ಕಾರ್ಕಳ, ಮೇ 18 (DaijiworldNews/MS): ಮಂಗಳೂರು ನಗರದ ಹೊರವಲಯದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯ ಯಡವಟ್ಟಿನಿಂದ ಘಟನೆ ಕೊರೋನಾ ಸೋಂಕಿತ ಮೃತದೇಹ ಅದಲು-ಬದಲಾಗಿ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾದ ಘಟನೆ ಮೇ 17ರಂದು ಕಾರ್ಕಳದಲ್ಲಿ ನಡೆದಿದೆ.
ಶೃಂಗೇರಿ ಮೂಲದ 44 ವಯಸ್ಸಿನ ವ್ಯಕ್ತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರು ಕಾರ್ಕಳದ ಬೋರ್ಕಟ್ಟೆಯ ಪತ್ನಿ ಮನೆಗೆ ಬಂದಿದ್ದ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಹೊಸಬೆಟ್ಟಿನ ವ್ಯಕ್ತಿಯೊಬ್ಬರ ಶವವೂ ಸಮೀಪದಲ್ಲೇ ಇದ್ದುದರಿಂದ ಸೋಮವಾರ ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಕಾರ್ಕಳದ ವ್ಯಕ್ತಿಯ ಹೊಸಬೆಟ್ಟಿನ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.
ಅಂತ್ಯ ಸಂಸ್ಕಾರಕ್ಕೆ ಕಾರ್ಕಳ ಕರಿಕಲ್ಲು ರುದ್ರಭೂಮಿಗೆ ಅಂಬ್ಯುಲೆನ್ಸ್ ತಂದಾಗ ಶವ ಅದಲು ಬದಲಾಗಿರುವುದು ಸಂಬಂಧಿಕರ ಅರಿವಿಗೆ ಬಂದಿತ್ತು. ಕೂಡಲೇ ವಾಪಾಸ್ ಕಳುಹಿಸಿದರು. ಅನಂತರ ಮೃತದೇಹವನ್ನು ಬದಲಿಸಿ ನೀಡಿದರು. ಸಂಭಂದಿಕರು ಶವ ತಮ್ಮವನದೇ ಎಂದು ಖಚಿತಪಡಿಸಿಕೊಂಡು ಕರಿಯಕಲ್ಲಿಗೆ ತಂದು ಅಂತ್ಯಸಂಸ್ಕಾರ ನಡೆಸಿದರು.
ಇನ್ನು ಅತ್ತ ಹೊಸಬೆಟ್ಟಿನವರ ಸ್ಥಿತಿಯೂ ಇದೇ ಆಗಿತ್ತು. ಶವಾಗಾರದಲ್ಲಿ ವಿಚಾರಿಸಿದಾಗ ಶವ ಕಾರ್ಕಳಕ್ಕೆ ರವಾನೆಯಾಗಿರುವುದು ತಿಳಿದುಬಂತು. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಂಬಂಧಿಕರು ತೀವ್ರ ಆಕ್ರೋಶ ಹೊರಹಾಕಿದರು.