ಮೂಡುಬಿದಿರೆ, ಮೇ 17 (DaijiworldNews/SM): ಹೊಸಂಗಡಿ ಬಳಿ ಫಲ್ಗುಣಿ ನದಿಗೆ ನೂತನವಾಗಿ ನಿರ್ಮಿಸಿದ ಕಿಂಡಿ ಆಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಸ್ಥಳೀಯ ಮನೆಗಳು ಮತ್ತು ಅಡಿಕೆ ತೋಟಗಳಿಗೆ ನೀರು ನುಗ್ಗುವ ಅಪಾಯವುಂಟಾಗಿದೆ.
ಪಶ್ಚಿಮವಾಹಿನಿ ಯೋಜನೆಯಡಿ ಸುಮಾರು ಎಂಟು ಕೋಟಿ ರೂ. ವೆಚ್ಚದಲ್ಲಿ ಈ ಅಣೆಕಟ್ಟು ನಿರ್ಮಿಸಲಾಗಿತ್ತು. ಹೊಸಂಗಡಿಯಿಂದ ಮೂಡುಬಿದಿರೆಗೆ ಸಂಪರ್ಕ ಸೇತುವಾಗಿ ಹಾಗೂ ಈ ಭಾಗದಲ್ಲಿ ನೀರು ಸಂಗ್ರಹಿಸಲು ಕಿಂಡಿಗಳನ್ನು ಈ ಅಣೆಕಟ್ಟು ಹೊಂದಿದೆ. ಬೇಸಿಗೆಯಲ್ಲಿ ನೀರು ಸಂಗ್ರಹಿಸಲು ಹಲಗೆಗಳನ್ನು ಅಳವಡಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಅಣೆಕಟ್ಟಿನಲ್ಲಿ ನೀರು ತುಂಬಿದೆ. ಕಿಂಡಿ ಆಣೆಕಟ್ಟಿಗೆ ಅಳವಡಿಸಿದ ಹಲಗೆ ತೆಗೆಯದಿರುವುದರಿಂದ ನದಿಯಂಚಿನಲ್ಲಿರುವ ಅಡಕೆ ತೋಟಗಳಿಗೂ ನೀರು ನುಗ್ಗಿದೆ. ನದಿ ತಟದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ದೇವಸ್ಥಾನ ಮಸೀದಿಯೂ ಈ ಭಾಗದಲ್ಲಿದೆ. ಸಂಬಂಧಪಟ್ಟವರು ಹಲಗೆ ತೆಗೆಯಲು ಬಂದಿದ್ದರೂ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಅಸಾಧ್ಯವೆಂದು ವಾಪಸ್ಸು ತೆರಳಿದ್ದಾರೆ. ಇದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.