ಉಳ್ಳಾಲ, ಮೇ.17 (DaijiworldNews/HR): ಹರೇಕಳ-ಅಡ್ಯಾರು ಅಣೆಕಟ್ಟು ಕಾಮಗಾರಿಗೆ ಚಂಡಾಮಾರುತದಿಂದಾಗಿ ಕೋಟ್ಯಂತರ ನಷ್ಟ ಉಂಟಾಗಿದ್ದು, ಈ ಬಗ್ಗೆ ಕಂಪೆನಿಗೆ ಆಗಿರುವ ನಷ್ಟದ ಕುರಿತು ರಾಜ್ಯ ಸರಕಾರದ ಗಮನಕ್ಕೆ ತರುತ್ತೇನೆ ಎಂದು ರಾಜ್ಯ ಸಚಿವ ಸ್ಥಾನಮಾನ ಪಡೆದ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
200 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಹರೇಕಳ-ಅಡ್ಯಾರು ಅಣೆಕಟ್ಟಿನ ಕಾಮಗಾರಿಗೆ ಚಂಡಾಮಾರುತದ ಪರಿಣಾಮ ನದಿ ನೀರು ನುಗ್ಗಿ ಆಗಿರುವ ಅನಾಹುತವನ್ನು ದೋಣಿ ಮುಖೇನ ತೆರಳಿ ಹರೇಕಳ ಗ್ರಾಮಸ್ಥರ ಜೊತೆಗೆ ವೀಕ್ಷಿಸಿ ಮಾತನಾಡಿದ ಅವರು, "ತೌತ್ತೇ ಚಂಡಮಾರುತದ ಪರಿಣಾಮ ಮಂಗಳೂರು ಕ್ಷೇತ್ರದಲ್ಲಿಯೇ ಬಹಳಷ್ಟು ಅನಾಹುತಗಳು ಸಂಭವಿಸಿದೆ. ಉಳ್ಳಾಲ ಕೋಡಿಯಿಂದ ಮೊಗವೀರಪಟ್ನ, ಸೋಮೇಶ್ವರ ಉಚ್ಚಿಲದವರೆಗೆ ಚಂಡಾಮಾರುತದ ಪರಿಣಾಮವನ್ನು ಉಸ್ತುವಾರಿ ಸಚಿವರ ಭೇಟಿ ವೇಳೆ ವೀಕ್ಷಿಸಿದ್ದೇನೆ. ಹರೇಕಳ ಗ್ರಾಮಕ್ಕೆ ಸರಕಾರ ನೀಡಿರುವ ಉತ್ತಮ ಯೋಜನೆಯಾದ ಹರೇಕಳ -ಅಡ್ಯಾರು ಅಣೆಕಟ್ಟು ನಿರ್ಮಾಣ ಕಾಮಗಾರಿಗೂ ಬಹಳ ನಷ್ಟ ಉಂಟಾಗಿದೆ. ಚಂಡಾಮಾರುತದ ಪರಿಣಾಮದಿಂದಾಗಿ ಕಾಮಗಾರಿಗೆ ಬೇಕಾದ ಸಿಮೆಂಟ್, ಸ್ಟೀಲ್ , ಯಂತ್ರಗಳು ನೀರಿನಲ್ಲಿ ಮುಳುಗಿ ರೂ.10 ಕೋಟಿ ನಷ್ಟ ಉಂಟಾಗಿರುವುದು ಗಮನಕ್ಕೆ ಬಂದಿದೆ. ಸುಸಜ್ಜಿತವಾಗಿ ಒಂದನೇ ದರ್ಜೆಯ ಗುತ್ತಿಗೆದಾರರು ಕಾಮಗಾರಿ ಕೈಗೊಂಡಿದ್ದಾರೆ. ಕಂಪೆನಿ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸುತ್ತಾ ಬಂದಿದೆ. ತ್ವರಿತಗತಿಯಲ್ಲಿ ದೊಡ್ಡ ಯಂತ್ರಗಳ ಮೂಲಕ ಆಗಿರುವ ಅನಾಹುತಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ" ಎಂದರು.
ನದಿ ಮಧ್ಯೆ ಸಿಲುಕಿರುವ ಮೂರು ಎಕ್ಸಾವೇಟರ್, 1 ಕ್ರೇನ್( ಕ್ರೇನ್ )ಗಳನ್ನು ಮೇಲೆತ್ತುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಮೂರು ದಿನಗಳಿಂದ ನದಿ ಮಧ್ಯೆ ಸಿಲುಕಿದ್ದು, ರಾತ್ರಿ ಹಗಲು ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ. ಆರು ಕಡೆಗಳಲ್ಲಿ ನಿರ್ಮಿಸಲಾಗಿದ್ದ ಪೈಪ್ ಟನಲ್ ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 32 ಪಂಪ್ ಗಳು, 125 ಕೆ.ವಿ ಏಳು ಜನರೇಟರುಗಳು ನದಿ ನೀರಿನ ಪಾಲಾಗಿವೆ. 7,000 ಸಿಮೆಂಟ್ ಬ್ಯಾಗುಗಳು, ಸ್ಟೀಲ್ ರಾಡುಗಳು ಹಾಗೂ ಕಬ್ಬಿಣದ ಸೆಂಟ್ರಿಂಗ್ ಸಾಮಗ್ರಿಗಳೆಲ್ಲವೂ ನೀರುಪಾಲಾಗಿವೆ. ಒಟ್ಟು ರೂ. 10 ಕೋಟಿ ನಷ್ಟ ಅಂದಾಜಿಸಲಾಗಿದೆ ಎಂದು ಪ್ರಾಜೆಕ್ಟ್ ಇಂಚಾರ್ಜ್ ಗುರುಮೂರ್ತಿ ತಿಳಿಸಿದ್ದಾರೆ.
ತುಂಬೆ ಶಂಭೂರಿನಲ್ಲಿರುವ ಎಎಂಆರ್ ಡ್ಯಾಂನಲ್ಲಿ ನೀರು ಬಿಡುವ ಕುರಿತು ಮಾಹಿತಿಯನ್ನು ನೀಡುತ್ತಿದ್ದಲ್ಲಿ ದುರಂತ ಸಂಭವಿಸುತ್ತಿರಲಿಲ್ಲ. ಚಂಡಾಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಮಾಹಿತಿಯೂ ಜಿಲ್ಲಾಡಳಿತ ನೀಡಿತ್ತು. ಮಳೆಯಾಗುವ ಸಾಧ್ಯತೆ ಇರುವುದರಿಂದ ಎಎಂ ಆರ್ ಡ್ಯಾಂ ಅಧಿಕೃತರು ಹರೇಕಳದಲ್ಲಿ ಕಾಮಗಾರಿ ನಡೆಯುವ ಮಾಹಿತಿ ಇರುವುದರಿಂದ ನೀರು ಬಿಡುವ ಮುನ್ಸೂಚನೆ ನೀಡುತ್ತಿದ್ದಲ್ಲಿ ಎಲ್ಲಾ ಯಂತ್ರಗಳನ್ನು ಹಾಗೂ ಸಾಮಗ್ರಿಗಳನ್ನು ಬದಿಗೆ ತರುತ್ತಿದ್ದೆವೆ. ಆದರೆ ಸೋಮವಾರ ಮಧ್ಯರಾತ್ರಿ 3 ಗಂಟೆ ವೇಳೆಗೆ ಒಮ್ಮಿಂದೊಮ್ಮೆಲೇ ನೀರು ನುಗ್ಗಿ ಇಡೀ ಪ್ರವಾಹವೇ ಸಂಭವಿಸಿದೆ.
ಕಾಮಗಾರಿ ಸ್ಥಳದ ಸಮೀಪದಲ್ಲೇ ತಾತ್ಕಾಳಿಕ ಶೆಡ್ ನಲ್ಲಿ 50 ಮಂದಿ ಕಾರ್ಮಿಕರು ಮಲಗಿದ್ದೆವು. ನಸುಕಿನ 3 ಗಂಟೆ ವೇಳೆಗೆ ಏಕಾಏಕಿ ನೀರು ತಾವಿದ್ದ ಶೆಡ್ ನತ್ತ ನುಗ್ಗಿದೆ. ಕೂಡಲೇ ಎಲ್ಲರೂ ಅಲ್ಲಿಂದ ಓಡಿ ದಡ ಸೇರಿಕೊಂಡೆವು. ಶೆಡ್ ನಲ್ಲಿದ್ದ ಅಡುಗೆ ಸಾಮಗ್ರಿಗಳು , ವಸ್ತುಗಳು ಎಲ್ಲವೂ ನೀರುಪಾಲಾಯಿತು. ಮುನ್ನೆಚ್ಚರಿಕೆ ಇಲ್ಲದೇ ಕಂಪೆನಿ ಕೋಟ್ಯಂತರ ವೆಚ್ಚದ ಸಾಮಗ್ರಿಗಳು ಎಲ್ಲವೂ ನೀರುಪಾಲಾದವು. ಇದೀಗ ಮುಳುಗಿರುವ ಸೊತ್ತುಗಳನ್ನು ಮೇಲೆತ್ತುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಕಾರ್ಮಿಕ ಪಶ್ಚಿಮ ಬಂಗಾಳದ ರೀಪುಲ್ ಶರ್ಕಾರ್ ಹೇಳುತ್ತಾರೆ.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಹೇಮಲತಾ ಭಂಡಾರಿ, ಪಾವೂರು ಗ್ರಾ.ಪಂ ಮಾಜಿ ಸದಸ್ಯ ವಾಮನರಾಜ್, ಬಿಜೆಪಿ ವಾಡ್9 ಅಧ್ಯಕ್ಷ ಕಿಶೋರ್ ಸಪಲಿಗ, ಬಿಜೆಪಿ ಕೊಣಾಜೆ ಶಕ್ತಿ ಕೇಂದ್ರದ ಕಾರ್ಯದರ್ಶಿ ಸದಾಶಿವ ಆಚಾರ್ಯ, ನೇತ್ರಾವತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಪೂಜಾರಿ, ಕಿರಣ್ ಕಡವಿನಬಳಿ, ಅಭಿಜಿತ್ ಕಡವಿನಬಳಿ, ನಿಕೇತನ್ ಕಡವಿನಬಳಿ, ಶರತ್ ಕಡವಿನಬಳಿ, ಸತೀಶ್ ಸಪಲಿಗ ಕಡವಿನಬಳಿ, ಯೋಗೀಶ್ ಕಡವಿನಬಳಿ, ಸಂತೋಷ್ ಸಪಲಿಗ, ಸುಮನ್, ಉದಯಕುಮಾರ್ ಗ್ರಾಮಚಾವಡಿ, ವಿ.ಹಿಂ.ಪ ದ ಪ್ರಮುಖ ಪ್ರೇಮರಾಜ್, ನಿತಿನ್ ರಾಜಗುಡ್ಡೆ, ಶರತ್ ರಾಜಗುಡ್ಡೆ, ರಮೇಶ್ ಪದವು ಉಪಸ್ಥಿತರಿದ್ದರು.