ಬಂಟ್ವಾಳ, ಮೇ.17 (DaijiworldNews/HR): ಎಲ್ಲಾ ಗ್ರಾ.ಪಂ.ಸದಸ್ಯರನ್ನೂ ಟಾಸ್ಕ್ ಫೋರ್ಸ್ ಸಮಿತಿಗೆ ಸೇರಿಸಿಕೊಂಡು ಕೊರೊನಾ ನಿಗ್ರಹದಲ್ಲಿ ಜವಬ್ದಾರಿಯುತವಾಗಿ ತೊಡಗಿಸಿಕೊಳ್ಳಬೇಕು, ನಿರ್ಲಕ್ಷ್ಯ, ದಾಕ್ಷಿಣ್ಯ ಬಿಟ್ಟು ಕೆಲಸಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಸಜಿಪಮೂಡ ಗ್ರಾಮಪಂಚಾಯತ್ನಲ್ಲಿ ಸೋಮವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾಗೆ ತುತ್ತಾಗಿ ಸಂಕಷ್ಟಕ್ಕೆ ಒಳಗಾದ ಮನೆಗಳಿದ್ದರೆ, ಶಾಸಕರ ವಾರ್ ರೂಂ ಮೂಲಕ ನೆರವು ಪಡೆದುಕೊಳ್ಳಬಹುದು, ಜೊತೆಗೆ ಗ್ರಾಮಪಂಚಾಯತ್ ಅಂತಹಾ ಬಡಕುಟುಂಬಗಳಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು" ಎಂದರು.
ಸಜಿಪಮೂಡ ಗ್ರಾಮದಲ್ಲಿ ಕೊರೊನಾ ನಿಗ್ರಹ ಕುರಿತಾಗಿ ಆರೋಗ್ಯ ಇಲಾಖೆಯ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, "ಲಸಿಕೆ ನೀಡಿಕೆಯಲ್ಲೂ ಪ್ರಗತಿ ಕಾಣಬೇಕು,
45 ವರ್ಷಕ್ಕಿಂತ ಮೇಲ್ಪಟ್ಟವರು ಇನ್ನೂ ಲಸಿಕೆ ಪಡೆದುಕೊಳ್ಳದೇ ಇದ್ದಲ್ಲಿ ಅಂತವರನ್ನು ಗುರುತಿಸಿ ಲಸಿಕೆ ಕೊಡಿಸಬೇಕು" ಎಂದು ತಿಳಿಸಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಮಾತನಾಡಿ, "ಒಂದನೆ ಲಸಿಕೆ ಪಡೆದವರಿಗೆ ನಿಗದಿತ ಕಾಲದಲ್ಲಿ ದ್ವಿತೀಯ ಲಸಿಕೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಮೊದಲ ಲಸಿಕೆಗೆ ಮಾತ್ರ ನೋಂದಣಿ ಅಗತ್ಯವಿದ್ದು, ಪ್ರತಿಯೊಬ್ಬರೂ ನೋಂದಣಿಮಾಡಿಕೊಳ್ಳಬೇಕು, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಹಂತಹಂತವಾಗಿ ಎಲ್ಲರಿಗೂ ಲಸಿಕೆ ಒದಗಿಸಲು ಸರ್ಕಾರ ಕೈಗೊಳ್ಳಲಿದೆ" ಎಂದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, "ಗ್ರಾಮಮಟ್ಟದಲ್ಲಿ ಕೊರೊನಾ ನಿಯಂತ್ರಣದ ಮೂಲಕ ಕೊರೊನಾ ಮುಕ್ತ ಗ್ರಾಮ ನಿರ್ಮಿಸುವಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಜವಬ್ದಾರಿ ಮಹತ್ತರವಾಗಿದೆ. ಗ್ರಾಮಪಂಚಾಯತ್ ಹಂತದಲ್ಲಿ ನಿಯಮಗಳ ಪಾಲನೆ ಹಾಗೂ ಅದರ ನಿರ್ವಹಣೆ ಗೆ ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು" ಎಂದಿದ್ದಾರೆ.
ಇನ್ನು ಹೊರರಾಜ್ಯ, ಹೊರಜಿಲ್ಲೆಯಿಂದ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸುವುದು, ಅನಗತ್ಯ ಸುತ್ತಾಟಕ್ಕೆ ಕಡಿವಾಣ, ಹೋಂ ಐಸೋಲೇಶನ್ ವ್ಯವಸ್ಥೆಯ ಲಭ್ಯತೆ, ಕೊರೊನಾ ಕೇರ್ ಸೆಂಟರ್ ನಿರ್ವಹಣೆ , ಲಾಕ್ಡೌನ್ ನಿಯಮಗಳ ಪಾಲನೆ, ಲಸಿಕೆ ಒದಗಿಸಲು ಕ್ರಮ ಮೊದಲಾದ ಜವಬ್ದಾರಿಗಳನ್ನು ಟಾಸ್ಕ್ ಫೋರ್ಸ್ ನಿರ್ವಹಿಸುವಂತೆ ಇಓ ತಿಳಿಸಿದರು.
ಸಜೀಪ ಮುನ್ನೂರು ಗ್ರಾ.ಪ.ಅದ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್, ವೈದ್ಯಾಧಿಕಾರಿ ಡಾ. ತುಫೈಲ್, ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಕರಣಿಕೆ ಸ್ವಾತಿ,
ಶಾಸಕರ ವಾರ್ ರೂಂ ಪ್ರಮುಖರಾದ ದೇವದಾಸ್ ಶೆಟ್ಟಿ , ದೇವಪ್ಪ ಪೂಜಾರಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶವಂತ ಸಜೀಪ,ಸುರೇಶ್ ಪೂಜಾರಿ ,ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.