ಬಂಟ್ವಾಳ, ಮೇ.17 (DaijiworldNews/HR): ಸರ್ಕಾರದ ನಿರ್ದೇಶನದಂತೆ ಕೊರೊನಾ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರೊಂದಿಗೆ ಟಾಸ್ಕ್ ಫೋರ್ಸ್ ಸಮಿತಿಯೂ ನಿಗಾವಹಿಸಬೇಕು" ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಲಹೆ ನೀಡಿದ್ದಾರೆ.
ಈ ಕುರಿತು ಅನಂತಾಡಿ ಗ್ರಾಮಪಂಚಾಯತ್ ನಲ್ಲಿ ಸೋಮವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, "45 ವರ್ಷಕ್ಕಿಂತ ಮೇಲ್ಪಟ್ಟವರು ಇನ್ನು ಕೂಡ ಲಸಿಕೆ ಪಡೆದುಕೊಳ್ಳದೇ ಇದ್ದಲ್ಲಿ ಅಂತವರನ್ನು ಗುರುತಿಸಿ, ಲಸಿಕೆ ಪಡೆದುಕೊಳ್ಳಲು ಮನವೊಲಿಸಿ, ಲಸಿಕೆ ನೀಡಿಕೆಯಲ್ಲಿ ಶೇ.100 ಸಾಧನೆ ಮಾಬೇಕು. ಗ್ರಾಮದಲ್ಲಿ ಎದುರಾಗುವ ಸಮಸ್ಯೆಗಳಿಗೆ ಗ್ರಾಮದಲ್ಲೇ ನಿಯಂತ್ರಣ ಸಾಧ್ಯವಾದರೆ ಮಾತ್ರ ನೈಜಪರಿಹಾರ ಸಾಧ್ಯ ಈ ನಿಟ್ಟಿನಲ್ಲಿ ಪಂಚಾಯತ್ ಗಮನಹರಿಸಬೇಕು" ಎಂದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಮಾಹಿತಿ ನೀಡಿ, "ನ್ಯಾಯಬೆಲೆಯ ಪಡಿತರಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿತರಿಸಲು ಅವಕಾಶವಿದ್ದು, ಕೊರೊನಾ ನಿಯಮಗಳನ್ನು ಪಾಲಿಸಿ ಪಡಿತರೆ ಪಡೆದುಕೊಳ್ಳಬೇಕು" ಎಂದು ಸೂಚಿಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, "ಕೊರೊನಾ ನಿಯಮಗಳ ಪಾಲನೆ ಹಾಗೂ ಅದರ ನಿರ್ವಹಣೆ ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯ ಆಶಯವಾಗಿದ್ದು, ಗ್ರಾಮಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೇಸರ್, ಕೊಡೆ ವಿತರಣೆಗೆ ಪಂಚಾಯತ್ ನಿಧಿಯಿಂದ ಅನುದಾನ ಬಳಸಿಕೊಳ್ಳಬೇಕು" ಎಂದು ಸೂಚಿಸಿದರು.
ಗ್ರಾ.ಪಂ.ವ್ಯಾಪ್ತಿಯಲ್ಲಿ 11 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಪೈಕಿ ಮೂವರು ಗುಣಮುಖರಾಗಿ , 8 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. 20 ಮಂದಿ ಹೊರಜಿಲ್ಲೆಯಿಂದ ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಈ ಪೈಕಿ ಕೊರೊನಾ ಲಕ್ಷಣವಿದ್ದ ಓರ್ವರಲ್ಲಿ ಪಾಸಿಟಿವ್ ವರದಿಯಾಗಿದೆ ಎಂದು ಆರೋಗ್ಯ ಸಹಾಯಕಿ ಮಾಹಿತಿ ನೀಡಿದರು.
ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ಉಪಾಧ್ಯಕ್ಷ ಕುಸುಮಾಧರ ಗೌಡ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಿ.ಡಿ.ಒ.ಜಯರಾಮ ಕೆ, ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಮಂಜುನಾಥ ಎಚ್, ಕೆ.ಶಾಸಕರ ವಾರ್ ರೂಂ.ಪ್ರಮುಖರಾದ ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳು ಮತ್ತು ಅಧಿಕಾರಿಗಳು ಹಾಜರಿದ್ದರು.