ಕುಂದಾಪುರ, ಮೇ.17 (DaijiworldNews/HR): ಇತ್ತೀಚೆಗಷ್ಟೆ ಸಂಚಾರಕ್ಕಾಗಿ ತೆರೆಯಲಾದ ಫ್ಲೈಓವರ್ನಲ್ಲಿ ಇನ್ನೋವಾ ಕಾರೊಂದು ಪಲ್ಟಿಯಾಗಿ, ಮಹಿಳೆಯೊಬ್ಬರು ಮೃತಪಟ್ಟು ಚಾಲಕ ಸೇರಿದಂತೆ ಎಂಟು ಜನರು ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಸಾವನ್ನಪ್ಪಿದ ಮಹಿಳೆಯನ್ನು ಹಟ್ಟಿಕುದ್ರು ನಿವಾಸಿ ವಸಂತಿ (35) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಹಟ್ಟಿಕುದ್ರು ನಿವಾಸಿಗಳಾದ ರತ್ನಾಕರ ಪೂಜಾರಿ (54), ಶಾರದಾ (45), ಪ್ರೇಮಾ (28), ಪುಷ್ಪಾ (29), ಅಕ್ಷತಾ (24), ರಕ್ಷಾ (15), ರವಿ ಪೂಜಾರಿ (59) ಮತ್ತು ಕಾರು ಚಾಲಕ ಸುಮಂತ್ ಪೂಜಾರಿ (31) ) ಎಂದು ಗುರುತಿಸಲಾಗಿದ್ದು, ಸುಮಂತ್ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರತ್ನಾಕರ ಪೂಜಾರಿ ಅವರ ಮಗಳು ಅಕ್ಷತಾ ಅವರ ವಿವಾಹ ಮೇ 13 ರಂದು ನಡೆದಿದ್ದು, ವರನ ಮನೆಯಿಂದ ವಧುವನ್ನು ತವರು ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಕುಂದಾಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿರುವ ಫ್ಲೈಓವರ್ನ ಇಳಿಜಾರಿನಲಿ ಈ ಅವಘಡ ಸಂಭವಿಸಿದೆ.
ಕಾರು ವೇಗವಾಗಿ ಬಂದ ಪರಿಣಾಮ ಫ್ಲೈಓವರ್ನ ತಡೆಗೋಡೆಗೆ ಢಿಕ್ಕಿ ಹೊಡೆದು ಸುಮಾರು 35 ಮೀಟರ್ ದೂರದವರೆಗೆ ಜಾರಿಕೊಂಡು ಹೋಗಿದೆ. ತಕ್ಷಣ ಸ್ಥಳೀಯರು ಮತ್ತು ಇತರ ವಾಹನ ಚಾಲಕರು ಕಾರನ್ನು ಮೇಲೆತ್ತಿ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲು ನೆರವಾದರು.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.