ಮಂಗಳೂರು, ಮೇ 17 (DaijiworldNews/MS): ತೌಕ್ತೆ ಚಂಡಮಾರುತ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿರುವ ಟಗ್ ನಲ್ಲಿ 9 ಮಂದಿ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರ್ಕಾರ ನೌಕಾಪಡೆಯ ಹೆಲಿಕ್ಯಾಪ್ಟರ್ ಬಳಸಲು ನಿರ್ಧರಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಪ್ರಕ್ಷುಬ್ದಗೊಂಡಿರುವ ಕಡಲು ಹಾಗೂ ಹವಾಮಾನ ವೈಪರೀತ್ಯದಿಂದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ಕೋಸ್ಟ್ ಗಾರ್ಡ್ , ಎಂಆರ್ ಪಿ ಎಲ್ , ಎನ್ಎಂಪಿಟಿ ಮತ್ತು ಕರಾವಳಿ ಕಾವಲು ಪಡೆಯ ಅಧಿಕಾರಿಗಳ ಜೊತೆ ರಕ್ಷಣ ಕಾರ್ಯ ವಿಧಾನದ ಬಗ್ಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ , ವಿಕೋಪ ನಿರ್ವಹಣಾ ಫ್ರಾಧಿಕಾರದ ಆಯುಕ್ತರು ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಗೋವಾ ಅಥವಾ ಕಾರವಾರದ ಕದಂಬ ನೌಕಾ ನೆಲೆಯಿಂದ ಹೆಲಿಕಾಪ್ಟರ್ ಗಳು ಆಗಮಿಸಲಿವೆ. ರಾಜ್ಯ ಸರ್ಕಾರದ ಮನವಿಯಂತೆ ನೌಕಾ ಸೇನೆಯ ಹೆಲಿಕಾಪ್ಟರ್ ಗಳು ಮಂಗಳೂರಿನ ಕಡಲ ತೀರಕ್ಕೆ ಬರಲಿದ್ದು, ಹವಾಮಾನ ತಿಳಿಯಾದ ತಕ್ಷಣ ಕಾರ್ಮಿಕರ ರಕ್ಷಣೆ ಮಾಡಲಿದೆ.
ಟಗ್ ನಲ್ಲಿ ಇರುವ 9 ಮಂದಿ ಸಿಬ್ಬಂದಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು 40 ಗಂಟೆಗಳನ್ನು ಈಗಾಗಲೇ ಪ್ರಕ್ಷುಬ್ದಗೊಂಡ ಸಮುದ್ರದಲ್ಲೇ ಕಳೆದಿದ್ದಾರೆ. "ಈಗಾಗಲೇ ಟಗ್ನಲ್ಲಿ ಇರುವ ನೀರು, ಆಹಾರ ಪದಾರ್ಥಗಳು ಖಾಲಿಯಾಗಿದ್ದು, ತೀವ ಗಾಳಿ ಮಳೆ ಹಾಗೂ ಆತಂಕದಿಂದಾಗಿ ಎಲ್ಲರೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಟಗ್ ಗೆ ನೀರು ತುಂಬುತ್ತಿದ್ದು ರಕ್ಷಣೆಗೆ ಯಾರೂ ಬರುತ್ತಿಲ್ಲ. ಬೃಹತ್ ಅಲೆಗಳು ನಮ್ಮ ಟಗ್ ಗೆ ಬಡಿಯುತ್ತಿವೆ" ಎಂದು ಟಗ್ ನಲ್ಲಿರುವ ಸಿಬ್ಬಂದಿಗಳು ದೂರವಾಣಿ ಕರೆ ಮೂಲಕ ಗೋಗರೆಯುತ್ತಿದ್ದಾರೆ.
ಕಾಪು ಕಡಲ ಕಿನಾರೆಯಿಂದ 15 ನಾಟೆಕಲ್ ಮೈಲ್ ದೂರದಲ್ಲಿ ಕೋರಮಂಡಲ್ ಎಂಬ ಟಗ್ನಲ್ಲಿ 9 ಕಾರ್ಮಿಕರು ಸಿಲುಕಿದ್ದಾರೆ. ಟಗ್ ಬಂದರಿನ ಸಂಪರ್ಕ ಕಡಿದುಕೊಂಡ ವಿಚಾರ ತಿಳಿಯುತ್ತಲೇ ಕೋಸ್ಟ್ ಗಾರ್ಡ್ " ವರಹಾ " ಹಡಗುಗಳು ಸಿಬ್ಬಂದಿಗಳು ರಕ್ಷಿಸುವ ಪ್ರಯತ್ನ ನಡೆಸಿತ್ತು. ಶುಕ್ರವಾರ ಮದ್ಯಾಹ್ನದಿಂದ ಶನಿವಾರ ಮುಂಜಾನೆವರೆಗೂ ಅದು ಟಗ್ಗನ್ನು ಹಿಂಬಾಲಿಸುತ್ತಾ ಬಂದಿದ್ದು ಕಾಪು ಪಾರ್ ಬಳಿ ಬಂಡೆಗಳಿರುವ ಕಾರಣ ಮುಂದಕ್ಕೆ ಚಲಿಸಲಾಗದೆ ಟಗ್ ನಿಂದ ಒಂದು ಮೈಲು ದೂರದಲ್ಲಿ ನಿಂತಿದೆ. ಇನ್ನು ಕೋಸ್ಟ್ ಗಾರ್ಡ್ ನ ಹೆಲಿಕ್ಯಾಪ್ಟರ್ ನೆರವು ಯಾಚಿಸಲಾಯಿತಾದರೂ ಹವಾಮಾನ ವೈಪರೀತ್ಯದ ಕಾರಣ ಅದು ಲಕ್ಷದೀಪದವರೆಗೆ ಬಂದು ಅದು ಹಿಂತಿರುಗಿದೆ.